ರಾಜ್ಯ

ಉಡುಪಿ: ಬಸ್ ನಿಲ್ದಾಣದ ಉಸ್ತುವಾರಿ ನೋಡಿಕೊಂಡು ಗ್ರಾಮಕ್ಕೆ ಮಾದರಿಯಾಗಿರುವ ಯುವಕ 

Sumana Upadhyaya

ಉಡುಪಿ: ಸಾಮಾನ್ಯವಾಗಿ ಬಸ್ ನಿಲ್ದಾಣ ಸುಸಜ್ಜಿತವಾಗಿರುವುದಕ್ಕಿಂತ ಶಿಥಿಲಾವಸ್ಥೆಯಲ್ಲಿರುವುದೇ ಹೆಚ್ಚು. ನಿರ್ವಹಣೆ ಕೊರತೆ ಮತ್ತು ಅಧಿಕಾರಿಗಳ ದಿವ್ಯನಿರ್ಲಕ್ಷ್ಯ ಈ ದುಸ್ಥಿತಿಗೆ ಕಾರಣವಾಗಿರುತ್ತದೆ. 


ನಗರಗಳಲ್ಲಾದರೆ ಕ್ಯಾಬ್ ಅಥವಾ ಮೆಟ್ರೊ ರೈಲುಗಳಿರುತ್ತದೆ. ಆದರೆ ಹಳ್ಳಿಗಳಲ್ಲಿ ಬಸ್ಸುಗಳೇ ಪ್ರಮುಖ ಸಾರ್ವಜನಿಕ ಸಾರಿಗೆಯಾಗಿವೆ. ಆದರೆ ಬಸ್ ನಿಲ್ದಾಣಗಳಲ್ಲಿನ ಈ ದುಸ್ಥಿತಿಯಿಂದಾಗಿ ಜನರು ಬೇಸಿಗೆ ಕಾಲದಲ್ಲಿ ಸೂರ್ಯನ ಬಿಸಿಲಿಗೆ, ಮಳೆಗಾಲದಲ್ಲಿ ಸೋರುವ ಸೂರಿನಡಿ ಒದ್ದೆಯಾಗಿಕೊಂಡು ನಿಲ್ಲಬೇಕಾದ ಪರಿಸ್ಥಿತಿ.


ಆದರೆ ಉಡುಪಿ ಜಿಲ್ಲೆಯ ವಡ್ಡರ್ಸೆ ಗ್ರಾಮದ ಬಸ್ ನಿಲ್ದಾಣಕ್ಕೆ ಹೋದರೆ ಈ ಸ್ಥಿತಿ ನಿಮಗೆ ಕಂಡುಬರಲಿಕ್ಕಿಲ್ಲ, ಒಂದು ಮೂಲೆಯಲ್ಲಿ ಡಸ್ಟ್ ಬಿನ್ ಇರುತ್ತದೆ. ಮತ್ತೊಂದೆಡೆ ಪತ್ರಿಕೆ ಮತ್ತು ಮ್ಯಾಗಜೀನ್ ಗಳನ್ನು ಒಪ್ಪ ಓರಣವಾಗಿ ಜೋಡಿಸಿರಲಾಗಿರುತ್ತದೆ. ಒಂದು ಮಡಕೆಯಲ್ಲಿ ನೀರನ್ನು ತುಂಬಿಸಿಟ್ಟಿರುತ್ತಾರೆ. ಬಸ್ ನಿಲ್ದಾಣದ ಹೊರಗೆ ಹೂವಿನ ಗಿಡಗಳನ್ನು ನೆಡಲಾಗಿದೆ. ಈ ಗ್ರಾಮಕ್ಕೆ ಮಾದರಿಯಾಗಿ ಬಸ್ ನಿಲ್ದಾಣವಿದೆ. ಮಳೆಗೆ ಸೋರುವುದು, ಬಿಸಿಲಿಗೆ ಪ್ರಯಾಣಿಕರು ಬೆಂದು ಹೋಗುವ ಅವಶ್ಯಕತೆಯಿಲ್ಲ. ಇದಕ್ಕೆಲ್ಲಾ ಕಾರಣ ಗ್ರಾಮದ 35 ವರ್ಷದ ಆಟೋರಿಕ್ಷಾ ಚಾಲಕ ರಘು ವಡ್ಡರ್ಸೆ. ಕಳೆದೊಂದು ವರ್ಷದಿಂದ ಪ್ರತಿನಿತ್ಯ ಹೋಗಿ ಈ ಬಸ್ ನಿಲ್ದಾಣ ಗುಡಿಸುತ್ತಾರೆ. ನೀರು ತಂದಿಡುತ್ತಾರೆ. ಓದಲು ಪತ್ರಿಕೆ, ಮ್ಯಾಗಜಿನ್ ಇಡುತ್ತಾರೆ. ಇಲ್ಲಿ ಪ್ರಯಾಣಿಕರು ಬಂದು ಯಾವುದೇ ಸಮಸ್ಯೆಯಿಲ್ಲದೆ ಬಸ್ಸಿಗಾಗಿ ಕಾಯಬಹುದು.

ರಘು ವಡ್ಡರ್ಸೆ 


ಬಡ ಕುಟುಂಬದಿಂದ ಬಂದಿರುವ ರಘು ವಡ್ಡರ್ಸೆ 8ನೇ ತರಗತಿಯವರೆಗೆ ಓದಿದ್ದಾರೆ. ಕುಟುಂಬದ ನಿರ್ವಹಣೆಗೆ ಸಂಪಾದನೆ ಮಾಡುವ ಅನಿವಾರ್ಯತೆಯಿಂದ ಓದಿಗೆ ಅರ್ಧದಲ್ಲಿಯೇ ತಿಲಾಂಜಲಿ ಹೇಳಿದರು. ಅವರಿಗೆ ನಾಲ್ವರು ಒಡಹುಟ್ಟಿದವರು. ರಘು ಅವರ ಕೆಲಸಕ್ಕೆ ಒಡಹುಟ್ಟಿದವರು ಕೂಡ ಸಹಾಯ ಮಾಡುತ್ತಾರಂತೆ. ಪೋಷಕರಾದ ವೆಂಕಟ ಪೂಜಾರಿ ಮತ್ತು ಪಾರ್ವತಿ ಅವರು ಕೂಡ ಮಗನ ಸಮಾಜ ಸೇವೆಯಿಂದ ಖುಷಿಯಾಗಿದ್ದಾರೆ. 


ಸ್ಥಳೀಯ ಜನಪ್ರತಿನಿಧಿಗಳ ಬಳಿ ಮಾತನಾಡಿ ಬಸ್ ನಿಲ್ದಾಣ ನಿರ್ಮಿಸಿ ಅದನ್ನು ನಾನು ಉಸ್ತುವಾರಿ ನೋಡಿಕೊಂಡು ಹೋಗುತ್ತೇನೆಂದು ಮುತುವರ್ಜಿ ವಹಿಸಿದ್ದು ಕೂಡ ರಘು ಅವರಂತೆ. ಸಂಸತ್ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಸ್ ನಿಲ್ದಾಣ ನಿರ್ಮಿಸಲಾಯಿತು. ನಂತರ ರಘು ಮತ್ತು ಕೆಲವು ಸ್ವಯಂ ಕಾರ್ಯಕರ್ತರ ಗುಂಪು ಅದನ್ನು ನೋಡಿಕೊಳ್ಳುತ್ತಿದ್ದಾರೆ. 


ವಡ್ಡರ್ಸೆ ಗ್ರಾಮ ಕುಂದಾಪುರದಿಂದ 18 ಕಿಲೋ ಮೀಟರ್ ದೂರದಲ್ಲಿ, ಕೋಟದಿಂದ ನಾಲ್ಕು ಕಿಲೋ ಮೀಟರ್ ಇದೆ. ಇಲ್ಲಿ ಸುಮಾರು 100ರಿಂದ 150 ಗ್ರಾಮಸ್ಥರಿದ್ದಾರೆ. 

SCROLL FOR NEXT