ರಾಜ್ಯ

ಪರೀಕ್ಷೆಯಲ್ಲಿ ಫೇಲ್: ಬೇಸತ್ತು ಇತರೆ ವಿದ್ಯಾರ್ಥಿಗಳ ಅಂಕಪಟ್ಟಿ, ಸ್ಕ್ಯಾನರ್ ಹೊತ್ತೊಯ್ದ ಭೂಪ!

Manjula VN

ಬೆಳಗಾವಿ: ಪರೀಕ್ಷೆಯಲ್ಲಿ ಪದೇ ಪದೇ ಅನುತ್ತೀರ್ಣನಾದ ಹಿನ್ನೆಲೆಯಲ್ಲಿ ಬೇಸತ್ತ ವಿದ್ಯಾರ್ಥಿಯೊಬ್ಬ ವಿಶ್ವವಿದ್ಯಾಲಯಕ್ಕೆ ನುಗ್ಗಿ ಇತರೆ ವಿದ್ಯಾರ್ಥಿಗಳ ಅಂಕಪಟ್ಟಿ ಹಾಗೂ ಸ್ಕ್ಯಾನರ್'ನಲ್ಲೇ ಹೊತ್ತೊಯ್ದಿರುವ ಘಟನೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದಿದೆ. 

ಬಸಪ್ಪ ಶಿವಲಿಂಗಪ್ಪ ಹೊನವಾಡ (23) ಅಂಕಪಟ್ಟಿಗಳನ್ನು ಹೊತ್ತೊಯ್ದಿರುವ ಭೂಪ. ಜಮಖಂಡಿ ತಾಲೂಕಿನ ಹುನ್ನೂರ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಬಿ.ಕಾಂ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಹೊಸವಾಡ, ಹಲವು ಸೆಮಿಸ್ಟರ್ ಗಳಲ್ಲಿ ಫೇಲ್ ಆಗಿದ್ದ. ಹಲವು ಬಾರಿ ಮರು ಪರೀಕ್ಷೆ ಬರೆದರೂ  ಉತ್ತೀರ್ಣನಾಗಿರಲಿಲ್ಲ. ಇದರಿಂದ ಸಾಕಷ್ಟು ಬೇಸರಗೊಂಡಿದ್ದ. 

ಇದರಂತೆ ವಿಶ್ವವಿದ್ಯಾಲಯ ಕುಲಸಚಿವರ ಬಳಿ ತೆರಳಿದ್ದ ಹೊನವಾಡ, ಪಾಸ್ ಮಾಡುತ್ತಿಲ್ಲ ಎಂದು ಮಾತಿನ ಚಕಮಕಿ ನಡೆಸಿದ್ದ. ಈ ವೇಳೆ ಕುಲಸಚಿವರು ಫಲಿತಾಂಶ ಸಮಾಧಾನ ಕೊಡಲಿಲ್ಲ ಎಂಬುದೇ ಆದರೆ, ಮರುಮೌಲ್ಯಮಾಪನಕ್ಕೆ ಹಾಕುವಂತೆ ಸಲಹೆ ನೀಡಿದ್ದರು. ಇದಕ್ಕೆ ಸುಮ್ಮನಾಗದ ಆರೋಪಿ, ಕುಲಸಚಿವರಿಗೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಎಂದು ಹೇಳಲಾಗುತ್ತಿದೆ. 

ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುತ್ತೇನೆಂದು ಬಂದಿದ್ದ ಹೊನವಾಡ ಹಾಸ್ಟೆಲ್ ನಲ್ಲಿ ಅಕ್ರಮವಾಗಿ ನೆಲೆಯೂರಿದ್ದಾನೆ. ಬಳಿಕ ಮಧ್ಯರಾತ್ರಿ ವಿವಿಯ ಶೌಚಾಲಯದ ಮುಕಾಂತರ ಕಚೇರಿಯೊಳಗೆ ನುಗ್ಗಿ 300 ಪ್ರಮಾಣಪತ್ರ ಹಾಗೂ 2 ಸ್ಕ್ಯಾನರ್ ಗಳನ್ನು ಕದ್ದು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಆರೋಪಿ ಭದ್ರತಾ ಸಿಬ್ಬಂದಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಳಿಕ ಭದ್ರತಾ ಸಿಬ್ಬಂದಿಗಳು ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. 

ಘಟನೆ ಬಳಿಕ ಯುವಕನಿಗೆ ಹಾಸ್ಟೆಲ್ ನಲ್ಲಿ ಜಾಗವನ್ನು ಅಕ್ರಮವಾಗಿ ನೀಡಿರುವ ಕುರಿತು ಚರ್ಚೆಗಳು ಆರಂಭವಾಗಿದ್ದು, ಈ ಸಂಬಂಧ ವಿವಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. 

SCROLL FOR NEXT