ಬೆಂಗಳೂರು: ಇತ್ತೀಚೆಗೆ ಜಿಹಾದಿ ಗ್ಯಾಂಗ್ ವಿರುದ್ಧ ಸಿಸಿಬಿ ತನಿಖೆ ಚುರುಕುನಿಂದ ಸಾಗಿದ್ದಂತೆ ರೋಚಕ ಸಂಗತಿಗಳು ಹೊರಬರುತ್ತಿದ್ದು, ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ರಾಜ್ಯದ ಇಸಿಸ್ ಸಘಟನೆಯ ಹೊಸ ಸದಸ್ಯರಿಗೆ ತರಬೇತಿ ಶಿಬಿರ ಸ್ಥಾಪಿಸುವ ಸಲುವಾಗಿ ಜಮೀನು ಖರೀದಿಗೆ ಶಂಕಿತ ಉಗ್ರರು ಪ್ರಯತ್ನ ನಡೆಸಿದ್ದರು ಎಂಬ ಸ್ಫೋಟಕ ಮಾಹಿತಿಯೊಂದು ಇದೀಗ ಬಹಿರಂಗಗೊಂಡಿದೆ.
ಈ ಕುರಿತು ಚಾಮರಾಜ ನಗರ ಎಸ್'ಪಿ ಆನಂದ್ ಕುಮಾರ್ ಅವರು ಮಾಹಿತಿ ನೀಡಿದ್ದು, ಅಲ್-ಹಿಂದ್ ಉಗ್ರರು ಸಡಕ್ತುಲ್ಲಾ ಹಾಗೂ ರೆಹ್ಮತ್ತೂಲ್ಲಾ ಎಂಬ ಇಬ್ಬರು ವ್ಯಕ್ತಿಗಳನ್ನು ಸಂಪರ್ಕಿಸಿದ್ದು, ಭೂಮಿ ಖರೀದಿಗೆ ಸಹಾಯ ಮಾಡುವಂತೆ ಕೇಳಿದ್ದಾರೆಂದು ತಿಳಿಸಿದ್ದಾರೆ.
ಇದೀಗ ಇಬ್ಬರನ್ನು ಪೊಲೀಸರು ವಿಚಾರಣೆಗಳಪಡಿಸಿದ್ದು, ಉಗ್ರರು ತಮ್ಮನ್ನು ಸಂಪರ್ಕಿಸಿದ್ದು ನಿಜ. ಆದರೆ, ನಾವು ಅವರನ್ನು ನೇರವಾಗಿ ಸಂಪರ್ಕಿಸಿಲ್ಲ. ಕೇವಲ ದೂರವಾಣಿ ಕರೆ ಮುಖಾಂತರವಷ್ಟೇ ನಮ್ಮ ನಡುವೆ ಮಾತುಕತೆ ನಡೆದಿತ್ತು ಎಂದು ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ.
ಉಗ್ರರು ರಾಜ್ಯದ ಗಡಿ ಹಾಗೂ ಜನ ಸಂಚಾರವಿಲ್ಲದ ಅರಣ್ಯ ಪ್ರದೇಶದಲ್ಲಿ ಭೂಮಿ ಖರೀದಿ ಮಾಡಲು ಪ್ರಯತ್ನ ನಡೆಸಿದ್ದರು ಎಂದು ಹೇಳಲಾಗುತ್ತಿದೆ.
ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಅಪರಿಚ ವ್ಯಕ್ತಿಗಳಿಗೆ ಮನೆ ಹಾಗೂ ಭೂಮಿ ಕೊಡುವುದಕ್ಕೂ ಮುನ್ನ ಎಚ್ಚರಿಕೆ ವಹಿಸುವಂತೆ ಜನರಿಗೆ ಸೂಚನೆ ನೀಡಿದೆ. ವ್ಯಕ್ತಿಗಳ ಶಂಕಾಸ್ಪದ ಓಡಾಟಗಳು ಕಂಡು ಬಂದಿದ್ದೇ ಆದರೆ, ಜನರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ತಿಳಿಸಿದ್ದಾರೆ.