ಬೆಂಗೆಳೂರು: ಬಿಬಿಎಂಪಿ ನಗರ ಜಿಲ್ಲೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿರುವ 71ನೇ ಗಣರಾಜ್ಯೋತ್ಸವ ನಗರದ ಕಬ್ಬನ್ ರಸ್ತೆಯ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಆರಂಭಗೊಂಡಿದ್ದು, ರಾಜ್ಯಪಾಲ ವಜುಭಾಯ್ ವಾಲಾ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ.
ರಾಜ್ಯಪಾಲ ವಿ.ಆರ್ ವಾಲಾ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಿದ್ದು, ಈ ವೇಳೆ ಭಾರತೀಯ ವಾಯುಪಡೆಯಿಂದ ಹೆಲಿಕಾಪ್ಟ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ನಂತರ ರಾಜ್ಯಪಾಲರು ಪರೇಡ್ ವೀಕ್ಷಿಸಿ, ಗೌರವ ನಂದನೆ ಸ್ವೀಕರಿಸಿ ನಾಡಿದನ ಜನತೆಗೆ ಗಣರಾಜ್ಯೋತ್ಸವ ಸಂದೇಶವನ್ನು ಸಾರಿದರು.
ಸ್ವಚ್ಛ ಭಾರತ ಅಭಿಯಾನ ಹಾಗೂ ಸ್ವಚ್ಛ ಸರ್ವೇಕ್ಷಣ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇದೇ ಮೊದಲ ಬಾರಿಗೆ ಬಿಬಿಎಂಪಿ ಪೌರ ಕಾರ್ಮಿಕರು ಪಥ ಸಂಚಲನ ನಡೆಸುತ್ತಿದ್ದಾರೆ.
33 ಜನರ ತಂಡವು ಸ್ವಚ್ಛತೆ ಕುರಿತು ಫಲಕಗಳನ್ನು ಹಿಡಿದು ಸಾಗಲಿದ್ದಾರೆ. ಕೆಎಸ್ಆರ್'ಪಿ, ಎನ್'ಸಿಸಿ, ಸೇವಾದಳ, ವಿವಿಧ ಶಾಲಾ ಮಕ್ಕಳನ್ನು ಸೇರಿ 1,750 ಮಂದಿಯ 44 ತುಕಡಿಗಳು ಪಥಸಂಚಲನ ನಡೆಸಲಿವೆ. ಎರಡು ಸಾವಿರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ.
ದಿ ಆರ್ಮಿ ಸರ್ವೀಸ್ ಕಾರ್ಪ್ಸ್ 20 ಸದಸ್ಯರಿಂದ ದಿ ಟೋರ್ನಾಡೋಸ್ ರೋಮಾಂಚಕ ಮೋಟರ್ ಸೈಕಲ್ ಪ್ರದರ್ಶನ, ರಾಜ್ಯ ಪೊಲೀಸ್ ಆಂತರಿಕ ಭದ್ರತಾ ವಿಭಾಗದ ಗರುಡ ಪಡೆಯ ಬಸ್ ಇಂಟರ್ ವೆನ್ಷನ್ ಅಣುಕು ಪ್ರದರ್ಶನವಿರಲಿದೆ. ಬೆಳಿಗ್ಗೆ 8 ರಿಂದ 11 ಗಂಟೆಯವರೆಗೂ ಕಬ್ಬನ್ ರಸ್ತೆಯ ಬಿಆರ್'ವಿ ಜಂಕ್ಷನ್ ನಿಂದ ಕಾಮರಾಜ ರಸ್ತೆಯ ಜಂಕ್ಷನ್ ವರೆಗೂ ವಾಹನ ಸಂಚಾರ ನಿಷೇಧಿಸಲಾಗಿದೆ.