ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಯ ಅಮಾನವೀಯ ಕರಾಳ ಮುಖಗಳು ಬೆಳಕಿಗೆ ಬರುತ್ತಿವೆ.
ಇದೀಗ 15 ಆಸ್ಪತ್ರೆಗಳ ಅಮಾನವೀಯ ನಡೆಗೆ ವೃದ್ಧೆಯೊಬ್ಬರು ಬಲಿಯಾಗಿರುವ ಮನಕಲಕುವ ಘಟನೆ ಮತ್ತೆ ನಗರದಲ್ಲಿ ಮರುಕಳಿಸಿದೆ. ಬಿಳೇಕಹಳ್ಳಿಯ 64 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿಗೆ ಚಿಕಿತ್ಸೆಕೊಡಿಸಲು ವೃದ್ಧ ಪತಿ ಕಳೆದ 2 ದಿನಗಳಿಂದ ನಗರದ ಬರೋಬ್ಬರಿ 15 ಆಸ್ಪತ್ರೆಗಳಿಗೆ ಸುತ್ತಾಡಿದ್ದರು. ಕೊನೆಗೂ ಚಿಕಿತ್ಸೆ ಸಿಗದೆ ವೃದ್ಧೆ ತಮ್ಮ ಜೀವನಕ್ಕೆ ವಿದಾಯ ಹೇಳಿದ್ದಾರೆ.
ಜಯನಗರದ ಸಾರ್ವಜನಿಕ ಆಸ್ಪತ್ರೆ, ಸಂಜಯ್ ಗಾಂಧಿ, ಕಿಮ್ಸ್, ಸೇಂಟ್ ಜಾನ್ಸ್, ವಿಕ್ಟೋರಿಯಾ, ಪ್ರಶಾಂತ್ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ಬೌರಿಂಗ್, ಫೋರ್ಟಿಸ್ ಆಸ್ಪತ್ರೆ, ರಾಜರಾಜಶ್ವೇರಿ ನಗರದಲ್ಲಿರುವ ಮೆಡಿಕಲ್ ಕಾಲೇಜ್, ಬಿಜಿಎಸ್ ಆಸ್ಪತ್ರೆ, ಅಪೋಲೊ, ಸಾಯಿ ರಾಂ ಆಸ್ಪತ್ರೆ, ಕೆಂಗೇರಿಯಲ್ಲಿದ್ದ ನರ್ಸಿಂಗ್ ಹೋಮ್ ಸೇರಿ ಹಲವು ಆಸ್ಪತ್ರೆ ಅಲೆದರೂ ಚಿಕಿತ್ಸೆ ಸಿಗದೇ ತಮ್ಮ ಪತ್ನಿ ಕೊನೆಯುಸಿರೆಳೆದಿದ್ದಾರೆ ಎಂದು ಮೃತರ ಪತಿ ಆರೋಪಿಸಿದ್ದಾರೆ.
ನಿರಂತರವಾಗಿ ಪ್ರಯತ್ನ ಪಟ್ಟರು ಯಾವುದೇ ಆಸ್ಪತ್ರೆಯವರು ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲಿಲ್ಲ. ಅವರ ಬೇಜವಾಬ್ದಾರಿತನಕ್ಕೆ ನನ್ನ ಪತ್ನಿ ಬಲಿಯಾಗಿದ್ದಾಳೆ. ಸರ್ಕಾರದ ವ್ಯವಸ್ಥೆ ಸರಿಯಿಲ್ಲ. ಇಂತಹ ವ್ಯವಸ್ಥೆ ಪತ್ನಿಯನ್ನೇ ಕೊಂದೇ ಬಿಟ್ಟಿತು ಎಂದು ಮೃತರ ಪತಿ ಕಣ್ಣೀರು ಹಾಕಿದ್ದಾರೆ