ರಾಜ್ಯ

ಬಿಬಿಎಂಪಿ ಸದಸ್ಯನ ಸಂಬಂಧಿಯ ಬರ್ಬರ ಹತ್ಯೆ: ದುಷ್ಕರ್ಮಿಗಳಿಗಾಗಿ ಪೊಲೀಸರಿಂದ ತೀವ್ರ ಹುಡುಕಾಟ

Manjula VN

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸದಸ್ಯರೊಬ್ಬರ ಸಂಬಂಧಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಗುರುವಾರ ರಾತ್ರಿ ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ವಿನೋದ್ (32) ಹತ್ಯೆಯಾದ ವ್ಯಕ್ತಿಯೆಂದು ಗುರ್ತಿಸಲಾಗುತ್ತಿದೆ. ವ್ಯವಹಾರ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗುತ್ತಿದೆ. 

ಹತ್ಯೆಯಾದ ವಿನೋದ್ ನಿನ್ನೆ ತಾತಗುಣಿ ಸಮೀಪವಿರುವ ಅಕ್ಕನ ಮನೆಗೆ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಚೌಡೇಶ್ವರಿ ಬಸ್ ನಿಲ್ದಾಣದ ಬಳಿ ರಾತ್ರಿ 8.30ರ ಸುಮಾರಿಗೆ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಏಕಾಏಕಿ ಕಾರನ್ನು ಅಡ್ಡಗಟ್ಟಿ ಮಚ್ಚಿನಿಂದ ತಲೆ ಹಾಗೂ ಇತರೆ ಭಾಗಗಳಿಗೆ ಬಲವಾಗಿ ಹೊಡೆದು ನಡು ರಸ್ತೆಯಲ್ಲೇ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. 

ವಿನೋದ್ ಅವರು ರಿಯಲ್ ಎಸ್ಟೇಟ್ ಜೊತೆಗೆ ಇಟ್ಟಿಗೆ ಹಾಗೂ ಜಲ್ಲಿ ಕ್ರಷರ್ ವ್ಯವಹಾರ ನಡೆಸುತ್ತಿದ್ದರು. ವೃತ್ತಿವೈಷಮ್ಯದಿಂದಲೇ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ವಿನೋದ್ ಐಷಾರಾಮಿ ಮನೆಯೊಂದರನ್ನು ಕಟ್ಟಿದ್ದು, ಈ ಸಂಬಂಧ ಕೆಲ ವ್ಯಕ್ತಿಗಳೊಂದಿಗೆ ಮಾತಿನ ಚಕಮಕಿ ಕೂಡ ನಡೆದಿತ್ತು ಎಂದು ಹೇಳಲಾಗುತ್ತಿದೆ. 

ಹತ್ಯೆ ಸಂಬಂಧ ಇದೀಗ ವಿಶೇಷ ತಂಡವೊಂದನ್ನು ರಚಿಸಲಾಗುತ್ತಿದ್ದು, ಪೊಲೀಸರು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

SCROLL FOR NEXT