ರಾಜ್ಯ

ಕೊರೋನಾ ಎಫೆಕ್ಟ್: ಗ್ರಾಮಗಳಲ್ಲಿ ಸ್ವಯಂಪ್ರೇರಿತ ಲಾಕ್ ಡೌನ್, ತೀವ್ರ ಸಂಕಷ್ಟದಲ್ಲಿ ದಿನಗೂಲಿ ನೌಕರರು

Sumana Upadhyaya

ಮೈಸೂರು: ಕೊರೋನಾ ವೈರಸ್ ಬಂದ ಮೇಲೆ ಲಾಕ್ ಡೌನ್ ಆಗಿ ದಿನಗೂಲಿ ನೌಕರರು ಜೀವನ ನಡೆಸಲು ಸಂಕಷ್ಟಪಡುತ್ತಿರುವ ಸಂದರ್ಭದಲ್ಲಿ ಹಳೆ ಮೈಸೂರು ಭಾಗದಲ್ಲಿ ಗ್ರಾಮದ ಮುಖ್ಯಸ್ಥರು ಮತ್ತು ಹಲವು ಪಂಚಾಯತ್ ಸದಸ್ಯರು ತೆಗೆದುಕೊಂಡಿರುವ ನಿರ್ಧಾರ ದಿನಗೂಲಿ ಕಾರ್ಮಿಕರನ್ನು ಇನ್ನಷ್ಟು ಕಷ್ಟಕ್ಕೆ ತಳ್ಳಿದೆ.

ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಗ್ರಾಮಗಳ ಮುಖ್ಯಸ್ಥರು ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸ್ವಯಂಪ್ರೇರಿತವಾಗಿ ತಮ್ಮ ಗ್ರಾಮಗಳನ್ನು ಸೀಲ್ ಡೌನ್ ಮಾಡುತ್ತಿದ್ದಾರೆ. ದಿನಗೂಲಿ ನೌಕರರು ಗ್ರಾಮ ತೊರೆದು ಹೋದರೆ ಅವರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಕಾನೂನು ಬೇರೆ ಹೊರಡಿಸಿದ್ದಾರೆ. ಅದೇ ರೀತಿ ಕೊರೋನಾ ಇರುವ ಪ್ರದೇಶಗಳಿಂದ ದಿನಗೂಲಿ ನೌಕರರನ್ನು ಕರೆತಂದರೆ ಸಹ ದಂಡ ಹಾಕುವುದಾಗಿ ಗ್ರಾಮದ ಮುಖ್ಯಸ್ಥರು ಬೆದರಿಕೆಯೊಡ್ಡುತ್ತಿದ್ದಾರೆ. ಕೊರೋನಾ ಹೆಚ್ಚುತ್ತಿರುವ ಸಮಯದಲ್ಲಿ ಮನೆಯಲ್ಲಿಯೇ ಇರಬೇಕು ಎನ್ನುವುದು ದಿನಕೂಲಿ ಮಾಡಿ ಬದುಕುವ ಜನರಿಗೆ ಕಷ್ಟವಾಗುತ್ತಿದೆ.

ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಗ್ರಾಮಗಳನ್ನು ಅನಿವಾರ್ಯವಾಗಿ ಸೀಲ್ ಡೌನ್ ಮಾಡಬೇಕಾಗಿದೆ ಎಂದು ಚಾಮರಾಜನಗರದ ಗುಂಡ್ಲುಪೇಟೆಯ ಗ್ರಾಮಸ್ಥ ದೇವರಾಜ್ ಹೇಳುತ್ತಾರೆ. ಬೆಂಗಳೂರು, ಮೈಸೂರುಗಳಿಂದ ಬರುವ ಜನರನ್ನು ಗ್ರಾಮಗಳೊಳಗೆ ಬಿಡುತ್ತಿಲ್ಲ. ಗ್ರಾಮದ ಪಂಚಾಯತ್ ಸದಸ್ಯರು ಮತ್ತು ಸಮುದಾಯ ಮುಖ್ಯಸ್ಥರು ಎಲ್ಲಾ ಗ್ರಾಮಗಳ ಜನರಿಗೆ ಮಾಹಿತಿ ನೀಡಿ ಪಕ್ಕದ ನಗರಗಳಲ್ಲಿ ಮತ್ತು ಹಳ್ಳಿಗಳಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರನ್ನು ಗ್ರಾಮದ ಒಳಗೆ ಸೇರಿಸಬೇಡಿ, ಪರಿಸ್ಥಿತಿ ಸುಧಾರಿಸುವವರೆಗೆ ಯಾವುದೇ ಕೆಲಸ ಮಾಡಿಸಬೇಡಿ ಎನ್ನುತ್ತಿದ್ದಾರೆ.

ಕೊರೋನಾ ಸೋಂಕು ಸಮಸ್ಯೆ ಯಾವಾಗ ಕೊನೆಯಾಗುತ್ತದೆಯೋ ಗೊತ್ತಿಲ್ಲ. ಅಲ್ಲಿಯವರೆಗೆ ಬದುಕುವುದು ಹೇಗೆ ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ ದಿನಗೂಲಿ ನೌಕರರು.

SCROLL FOR NEXT