ಬೆಂಗಳೂರು: ಕೊರೋನಾ ಸೋಂಕಿತರಿಗೆ ಶೇ.50ರಷ್ಟು ಹಾಸಿಗೆಗಳನ್ನು ನೀಡಿ ಸರ್ಕಾರದೊಂದಿಗೆ ಸಹಕಾರ ನೀಡದೇ ಹೋದಲ್ಲಿ ಆಸ್ಪತ್ರೆ ನೀಡಲಾಗುತ್ತಿರುವ ವಿದ್ಯುತ್ ಹಾಗೂ ನೀರು ಸರಬರಾಜನ್ನು ಕಡಿತಗೊಳಿಸಲಾಗುತ್ತದೆ ಎಂದು ವೈಟ್'ಫೀಲ್ಡ್'ನಲ್ಲಿರುವ ಮಣಿಪಾಲ್ ಆಸ್ಪತ್ರೆಯ ಸಿಇಒಗೆ ಸಚಿವ ಭೈರತಿ ಬಸವರಾಜ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಚಿವರು ಆಸ್ಪತ್ರೆಗೆ ಭೇಟಿ ನೀಡಿದ್ದು, ಈ ವೇಳೆ ಆಸ್ಪತ್ರೆಯ ಸಿಬ್ಬಂದಿಗಳು ಶೇ.50ರಷ್ಟು ಹಾಸಿಗೆಗಳನ್ನು ಸೋಂಕಿತರಿಗೆ ನೀಡಲು ಸಾಧ್ಯವಿಲ್ಲ ಎಂಬುದನ್ನು ಹೇಳಿ, ಸಚಿವರನ್ನು ಸಮಾಧಾನ ಪಡಿಯಲು ಯತ್ನಿಸಿದರು.
ಖಾಸಗಿ ಆಸ್ಪತ್ರೆಗಳೂ ಕೂಡ ಸೋಂಕಿತರಿಗೆ ಹಾಸಿಗೆ ನೀಡಬೇಕೆಂಬ ಮಾತುಗಳು ಹಾಗೂ ಕಾರ್ಯಾಚರಣೆ ನಗರದಲ್ಲಿ ಮಾತ್ರ ಕೇಳಿ ಬರುತ್ತಿತ್ತು. ಆದರೆ, ಇದೀಗ ಎಲ್ಲಾ ವಲಯಗಳಲ್ಲೂ ಕೇಳಿಬರಲು ಆರಂಭಿಸಿದೆ. ಇದೀಗ ಆಸ್ಪತ್ರೆಗಳ ಹಾಸಿಗೆ ಲಭ್ಯತೆ ಕುರಿತು ಎಲ್ಲಾ ವಲಯಗಳನ್ನೂ ನೀಡಲಾಗುತ್ತಿದೆ. ಪ್ರತೀ ಬಾರಿ ಸಭೆಯಲ್ಲಿ ಮಾತನಾಡುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಲಯವಾರು ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಸಿಗೆ ಲಭ್ಯವಿರುವಂತೆ ನೋಡಿಕೊಳ್ಳಬೇಕೆಂದು ಆಯಾ ವಲಯಗಳ ಉಸ್ತುವಾರಿ ಸಚಿವರಿಗೆ ಸೂಚನೆ ನೀಡುತ್ತಲೇ ಇದ್ದಾರೆ.
ಮಲ್ಲೇಶ್ವರಂನಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಸೌಲಭ್ಯವಿದ್ದು, ಈ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಸಂಪೂರ್ಣವಾಗಿ ಹಾಸಿಕೆಗಳನ್ನು ಮೀಸಲಿಡಲಾಗಿದೆ. ಸೋಂಕು ಭೀತಿ ಹಿನ್ನೆಲೆಯಲ್ಲಿ ಎಲ್ಲಾ ಆಸ್ಪತ್ರೆಗಳಲ್ಲೂ ಕೊರೋನಾ ಸೋಂಕಿತರನ್ನು ದಾಖಲು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಪ್ರತ್ಯೇತ ಕಟ್ಟಡಗಳಿದ್ದರೆ ಮಾತ್ರ ಚಿಕಿತ್ಸೆ ನೀಡಲು ಸಾಧ್ಯ ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ.