ರಾಜ್ಯ

ಸುಳ್ಳುಸುದ್ದಿ ವೈಭವೀಕರಣ ಬೇಡ: ಆಸ್ಪತ್ರೆಯಿಂದಲೇ ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ವಿಡಿಯೋ ಮನವಿ

Srinivasamurthy VN

ಬೆಂಗಳೂರು: ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಪಾಲಾಗಿರುವ ಪಾದರಾಯನಪುರ ಬಿಬಿಎಂಪಿ ಕಾರ್ಪೋರೇಟರ್ ಇಮ್ರಾನ್ ಪಾಷಾ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದು, ತಮ್ಮ ವಿರುದ್ಧದ ಸುದ್ದಿಗಳು ಸುಳ್ಳು ಎಂದು ಹೇಳಿದ್ದಾರೆ.

ಕೊರೋನಾ ವೈರಸ್ ಟೆಸ್ಟ್ ವರದಿ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಶನಿವಾರ ಇಮ್ರಾನ್ ಪಾಷಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಿಬಿಎಂಪಿ ಅಧಿಕಾರಿಗಳು ಆಂಬ್ಯುಲೆನ್ಸ್ ತೆಗೆದುಕೊಂಡು ಹೋಗಿದ್ದರು. ಆಗ ನೂರಾರು ಜನರು ಸೇರಿದ್ದರು. ಕೊರೋನಾ ಸೋಂಕು  ಇರುವುದು ದೃಢಪಟ್ಟಿದ್ದರೂ ಸಾಮಾಜಿಕ ಅಂತ ಕಾಯ್ದುಕೊಳ್ಳುವಲ್ಲಿ ಅವರು ವಿಫಲರಾಗಿದ್ದರು. ಇದೇ ವಿಚಾರವಾಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಇದೀಗ ಈ ಸುದ್ದಿಗಳು ಸುಳ್ಳು ಎಂದು ಕಾರ್ಪೋರೇಟರ್ ಇಮ್ರಾನ್ ಪಾಷಾ ಆಲವತ್ತು ಮಾಡಿಕೊಂಡಿದ್ದಾರೆ.

ಭಾನುವಾರ ರಾತ್ರಿ ಇಮ್ರಾನ್ ಪಾಷಾ ಫೇಸ್‌ಬುಕ್ ಮೂಲಕ ವಿಡಿಯೋ ಹಾಕಿದ್ದು, ತಮ್ಮ ವಾರ್ಡ್‌ನ ಜನರಿಗೆ, ಮಾಧ್ಯಮಗಳ ಹಲವು ವಿಚಾರಗಳನ್ನು ಹೇಳಿದ್ದಾರೆ. ಮಾಧ್ಯಮದಲ್ಲಿ ಬಂದ ವರದಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೊರೋನಾ ವೈರಸ್ ಸೋಂಕು ಬಂದಿದ್ದು ತಿಳಿದಿದ್ದರೂ  ಇಮ್ರಾನ್ ಪಾಷಾ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಲು ವಿಳಂಬ ಮಾಡಿದರು ಎಂಬ ವರದಿ ಬರುತ್ತಿದೆ. ನಾನು ಒಬ್ಬ ಜನಪ್ರತಿನಿಧಿಯಾಗಿ, ನಾಲ್ಕು ಜನರಿಗೆ ಬುದ್ಧಿ ಹೇಳುವ ಶಕ್ತಿ ಇಂತಹ ಕೆಲಸ ಮಾಡಲು ಸಾಧ್ಯವೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಮಾಧ್ಯಮಗಳಲ್ಲಿ  ಬರುತ್ತಿರುವ ಸುದ್ದಿಗಳು ಸುಳ್ಳು ಎಂದು ಹೇಳಿದ್ದಾರೆ.

ಪಾದರಾಯನಪುರ ಸೀಲ್ ಡೌನ್, ಕಾರ್ಪೋರೇಟರ್ ವಿರುದ್ಧ ಎಫ್‌ಐಆರ್!
ಬಿಬಿಎಂಪಿ ಕಾರ್ಪೊರೇಟರ್‌ ಇಮ್ರಾನ್‌ ಪಾಷಾ ಹಾಗೂ ಅವರ ಬೆಂಬಲಿಗರ ವಿರುದ್ಧ ಜೆ.ಜೆ. ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ಸಹ ದಾಖಲು ಮಾಡಲಾಗಿದೆ. ಕೊರೊನಾ ವೈರಸ್‌ ಇರುವುದು ಖಚಿತವಾದ ಬಳಿಕವೂ ಆಸ್ಪತ್ರೆಗೆ ತೆರಳಲು ವಿಳಂಬ ಮಾಡಿದ್ದಕ್ಕೆ ಮತ್ತು ಜನರ ಗುಂಪು  ಸೇರಲು ಕಾರಣವಾಗಿದ್ದಕ್ಕೆ ಪ್ರಕರಣ ದಾಖಲಾಗಿದೆ. ಈ ಕುರಿತು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬನೋತ್ ಈ ಕುರಿತು ಹೇಳಿಕೆ ನೀಡಿದ್ದು, "ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸಾಂಕ್ರಮಿಕ ರೋಗ ಹರಡಲು  ಪ್ರಯತ್ನಿಸಿದ ಹಾಗೂ ಅಕ್ರಮವಾಗಿ ಗುಂಪು ಸೇರಿಸಿದ್ದಾರೆ ಎಂದು ದೂರು ನೀಡಲಾಗಿತ್ತು" ಎಂದು ಹೇಳಿದ್ದಾರೆ.

SCROLL FOR NEXT