ರಾಜ್ಯ

ಹೊಸ ಕೊರೋನಾ ಪ್ರಕರಣ: ಬೆಂಗಳೂರನ್ನೂ ಮೀರಿಸುತ್ತಿರುವ ಯಾದಗಿರಿ!

Shilpa D

ಕಲಬುರಗಿ: ಕಳೆದ ತಿಂಗಳು ಯಾದಗಿರಿ ಜಿಲ್ಲೆಯಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ದಾಖಲಾಗಿರಲಿಲ್ಲ, ಮೇ 17ರ ವೇಳೆಗೆ  5 ಪ್ರಕರಣಗಳು ಪತ್ತೆಯಾಗಿದ್ದವು. ಆದರೆ ಯಾವಾಗ ಮಹಾರಾಷ್ಟ್ರದಿಂದ ವಲಸಿಗರು ಜಿಲ್ಲೆಗೆ ಬರಲು ಆರಂಭಿಸಿದರೋ ಅಂದಿನಿಂದ ಯಾದಗಿರಿ ಚಿತ್ರಣವೇ ಬದಲಾಗಿ ಹೋಗಿದೆ.

ರಾಜ್ಯದಲ್ಲೇ ಯಾದಗಿರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ರಾಜ್ಯ ರಾಜಧಾನಿ ಬೆಂಗಳೂರಿಗಿಂತ ಎರಡು ಪಟ್ಟು ಯಾದಗಿರಿಯಲ್ಲಿ ಕೊರೋನಾ ಕೇಸ್ ಗಳು ಪತ್ತೆಯಾಗುತ್ತಿವೆ.

ಬೇರೆ ಬೇರೆ ರಾಜ್ಯಗಳಿಂದ ವಲಸಿಗ ಕಾರ್ಮಿಕರು ಬರುತ್ತಿರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ ಎಂದು ಹೇಳಲಾಗುತ್ತಿದೆ. ಸಮುದಾಯ ಮಟ್ಟದಲ್ಲಿ ಹರಡಿದೆ ಎಂದು ಈ ಭಾಗದ ಜನ ಆತಂಕಕ್ಕೊಳಗಾಗಿದ್ದಾರೆ. 

ಮಹಾರಾಷ್ಟ್ರದಿಂದ ಬಂದವರನ್ನು ಹೊರತುಪಡಿಸಿ ಉಳಿದ ಸ್ಥಳಗಳಿಂದ ಬಂದವರಿಗೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಗೆ ಒಳ ಪಡಿಸಲಾಗುತ್ತಿದೆ.

ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಹೆಚ್ಚಿನ ಮಂದಿಯನ್ನು ನಿಭಾಯಿಸುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಹೀಗಾಗಿ ವರದಿ ಬರುವ ಮುನ್ನವೇ ಮನೆಗೆ ಕಳುಹಿಸಲಾಗುತ್ತಿದೆ. ಇದೇ ವೇಳೆ ಹೋಮ್ ಕ್ವಾರಂಟೈನ್ ಕೂಡ ಹಳ್ಳಿಗಳಲ್ಲಿ ತುಂಬಾ ಕಷ್ಟವಾಗಿದೆ.

ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದು ಮನೆಗೆ ತೆರಳಿದ ಅನೇಕರಲ್ಲಿ ಕೊರೋನಾ ಪಾಸಿಟಿವ್ ಬಂದಿದೆ. ಆರೋಗ್ಯ ಅಧಿಕಾರಿಗಳು ಅವರನ್ನು ಪತ್ತೆ ಹಚ್ಚಿ ಮತ್ತೆ ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ. ಆದರೆ ಅದಕ್ಕೂ ಮುನ್ನ ಅವರು ಹಲವರನ್ನು ಭೇಟಿ ಮಾಡಿರುವುದು ಮತ್ತಷ್ಟು ಅಪಾಯ ಹೆಚ್ಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ,

ಸೋಮವಾರದ ವೇಳೆಗೆ, ಈ ಪ್ರದೇಶದ ಸಕಾರಾತ್ಮಕ ಪ್ರಕರಣಗಳು 1,087 ಕ್ಕೆ ಏರಿದೆ, ಇದು ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಮೂರನೇ ಒಂದು ಭಾಗದಷ್ಟಿದೆ. ಈ ಪ್ರದೇಶದಲ್ಲಿ 700 ಕ್ಕೂ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದಾರೆ. ಬೆಂಗಳೂರು, ಮೈಸೂರು ಅಥವಾ ಬೆಳಗಾವಿಗೆ ಹೋಲಿಸಿದರೆ ಇಲ್ಲಿ ಡಿಸ್ಚಾರ್ಜ್ ಆಗುತ್ತಿರುವವರ ಪ್ರಮಾಣ ತೀರಾ ಕಡಿಮೆ.
 

SCROLL FOR NEXT