ರಾಜ್ಯ

ಕೊಲೆ ಮತ್ತು ಸುಲಿಗೆ ಪ್ರಕರಣ: ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ 2 ಚಾರ್ಜ್ ಶೀಟ್

Shilpa D

ಬೆಂಗಳೂರು: ತಿಲಕ್‌ನಗರ  ಜೋಡಿ ಕೊಲೆ ಪ್ರಕರಣ ಹಾಗೂ ಹಲವು ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ಬೆಂಗಳೂರು  ಕೇಂದ್ರ ಅಪರಾಧ ವಿಭಾಗವು ಎರಡು ಚಾರ್ಜ್‌ಶೀಟ್‌ ದಾಖಲಿಸಿದೆ.

ತಿಲಕನಗರ ಠಾಣೆ ವ್ಯಾಪ್ತಿಯಲ್ಲಿದ್ದ ಶಬನಂ ಡೆವಲಪರ್ಸ್ ಕಚೇರಿಯಲ್ಲಿ ನಡೆದಿದ್ದ ಜೋಡಿ ಕೊಲೆ ಹಾಗೂ ವೈಟ್‌ಪೀಲ್ಡ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿ ಕಿರುಕುಳ ನೀಡಿದ್ದ ಪ್ರಕರಣ ರವಿ ಪೂಜಾರಿ ಮೇಲಿತ್ತು. ಈ ಎರಡು ಪ್ರಕರಣದಲ್ಲಿ ಆತನ ವಿರುದ್ಧ ಇದೀಗ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 'ಎರಡು ಪ್ರಕರಣದಲ್ಲಿ ಮಾತ್ರ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಉಳಿದ ಪ್ರಕರಣಗಳ ತನಿಖೆ ಮುಂದುವರಿದಿದೆ ಎಂದು ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಹಲವು ಅಪರಾಧ ಪ್ರಕರಣಗಳಲ್ಲಿ ರವಿ ಪೂಜಾರಿ ಪೊಲೀಸರಿಗೆ ಬೇಕಾಗಿತ್ತು. ಕರ್ನಾಟಕದಲ್ಲಿ ಈತನ ಮೇಲೆ 200 ಕ್ಕೂ ಹೆಚ್ಚು ಪ್ರಕರಣಗಳಿವೆ. ರಾಜಧಾನಿ ಬೆಂಗಳೂರಿನಲ್ಲಿ 39, ಮಂಗಳೂರು 36, ಉಡುಪಿ 11, ಮೈಸೂರು, ಹುಬ್ಬಳ್ಳಿ-ಧಾರವಾಡ, ಕೋಲಾರ ಹಾಗೂ ಶಿವಮೊಗ್ಗದಲ್ಲಿ ತಲಾ ಒಂದೊಂದು ಪ್ರಕರಣವಿದೆ. ಸುಲಿಗೆ, ಅಪಹರಣ, ಸುಲಿಗೆ ಬೇಡಿಕೆ ಮತ್ತು ಕೊಲೆ ಬೆದರಿಕೆಗಳಿಗೆ ಸಂಬಂಧಿಸಿದಂತೆ ಮುಂಬೈನಲ್ಲಿ 49 ಮತ್ತು ಗುಜರಾತ್‌ನಲ್ಲಿ 75 ಪ್ರಕರಣಗಳು ರವಿ ಪೂಜಾರಿ ಮೇಲೆ  ದಾಖಲಿಸಲಾಗಿದೆ.

2007ರಲ್ಲಿ ತಿಲಕ್‌ ನಗರದಲ್ಲಿ ಗುಂಡಿನ ದಾಳಿ ನಡೆಸಿ ಜೋಡಿ ಕೊಲೆಯನ್ನು ರವಿ ಪೂಜಾರಿ ಮಾಡಿದ್ದರು. ಪೂಜಾರಿ ಅವರನ್ನು ಭಾರತಕ್ಕೆ ಹಸ್ತಾಂತರಿಸಿದ ಬಳಿಕ ಈ ಪ್ರಕರಣವನ್ನು ಮರು ತೆರೆಯಲಾಯಿತು. ಶಬ್ನಮ್‌ ಡೆವಲಪರ್ಸ್‌ ಅಧಿಕಾರಿಗಳು ಹಫ್ತಾ ನೀಡಲು ನಿರಾಕರಿಸಿದ್ದರಿಂದ ಈ ಎರಡು ಕೊಲೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದರು.

SCROLL FOR NEXT