ರಾಜ್ಯ

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದಿರುವವರಿಂದ ಕೊರೋನಾ ಜಾಸ್ತಿ: ವೀರೇಂದ್ರ ಹೆಗ್ಗಡೆ ಸ್ಪಷ್ಟೀಕರಣ 

Nagaraja AB

ಬೆಂಗಳೂರು: ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದಿರುವವರಿಂದ ಕೊರೋನಾ ಪ್ರಕರಣ ಜಾಸ್ತಿಯಾಗುತ್ತಿದೆ ಎಂಬ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ ಹಾಗೂ ವಿರೋಧ ಚರ್ಚೆಗೆ ಕಾರಣವಾಗಿದೆ. ಕೆಲವರು ಹೆಗ್ಗಡೆ ಅವರ ಪರವಾಗಿ ವಾದಿಸುತ್ತಿದ್ದರೆ, ಮತ್ತೆ ಕೆಲವರು ವಿರುದ್ಧವಾಗಿ ವಾದಿಸುತ್ತಿದ್ದಾರೆ.

ಈ ಮಧ್ಯೆ ತಮ್ಮ ಹೇಳಿಕೆ ಕುರಿತಂತೆ ವಿರೇಂದ್ರ ಹೆಗ್ಗಡೆ ಅವರೇ ಸ್ಪಷ್ಟೀಕರಣ ನೀಡಿದ್ದಾರೆ. ಸುದ್ದಿವಾಹಿನಿಯೊಂದರಲ್ಲಿ ದೇವಸ್ಥಾನಗಳನ್ನು ದೇವರ ದರ್ಶನಕ್ಕೆ ಮುಕ್ತ ಗೊಳಿಸುವ ವಿಚಾರದಲ್ಲಿ ಮಾತನಾಡುವಾಗ ಮಹಾರಾಷ್ಟ್ರದ ಜನರ ಸಂಪರ್ಕದಿಂದ ಕರ್ನಾಟಕದಲ್ಲಿ ಕೊರೋನಾ ಹೆಚ್ಚಾಗುತ್ತಿದೆ ಎಂಬ ಭಯವನ್ನು ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ.

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದಿರುವವರಿಂದ ಇಲ್ಲಿ ಕೊರೋನಾ ಪ್ರಕರಣ ಜಾಸ್ತಿಯಾಗುತ್ತಿದೆ, ಅವರು ಅಲ್ಲೇ ಇದ್ದರೆ ಉತ್ತಮ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ಕೇಳಿಬರುತಿತ್ತು. ನಾನೂ ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ಇದರ ಹಿಂದಿರುವ ಉದ್ದೇಶವನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು, ದುರುದ್ದೇಶಕ್ಕೆ ಬಳಸಬಾರದು ಎಂದಿದ್ದಾರೆ.

ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯನ್ನು ಮಹಾರಾಷ್ಟ್ರದಿಂದ ಬಂದಿರುವವರಿಗೆ ಕ್ವಾರಂಟೈನ್ ಗಾಗಿ ನೀಡಲಾಗಿದೆ. ಈ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಎಂದು ಉಡುಪಿ ಜಿಲ್ಲಾಡಳಿತ ನಿರ್ಧರಿಸಿದೆ. ಧರ್ಮಸ್ಥಳದಲ್ಲಿರುವ ರಜತಾದ್ರಿ ವಸತಿ ಗೃಹದ 300 ಕೊಠಡಿಯನ್ನು ಕ್ವಾರಂಟೈನ್ ಆಗಿ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

SCROLL FOR NEXT