ರಾಜ್ಯ

ಕೊರೋನಾ ಸೋಂಕು ವ್ಯಾಪಕವಾದರೆ ಕಲ್ಯಾಣ ಮಂಟಪ, ಕ್ರೀಡಾಂಗಣಗಳಲ್ಲಿ ಆಸ್ಪತ್ರೆಗಳ ನಿರ್ಮಾಣ: ಬಿಬಿಎಂಪಿ

Srinivasamurthy VN

ಬೆಂಗಳೂರು: ಬೆಂಗಳೂರಿನಲ್ಲಿ ಕೊರೋನಾ ಸೋಂಕು ವ್ಯಾಪಿಸಿದಲ್ಲಿ ಒಳಾಂಗಣ ಕ್ರೀಡಾಂಗಣ, ಕಲ್ಯಾಣ ಮಂಟಪ, ವಸ್ತುಪ್ರದರ್ಶನ ಕೇಂದ್ರಗಳನ್ನೇ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ.

ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್, ತಾತ್ಕಾಲಿಕ ಬಯಲು ಆಸ್ಪತ್ರೆಗಳನ್ನು ತೆರೆಯಲು ಕಂಠೀರವ ಕ್ರೀಡಾಂಗಣ, ಅರಮನೆ ಮೈದಾನದಲ್ಲಿನ ತ್ರಿಪುರವಾಸಿನಿ ಕಲ್ಯಾಣ ಮಂಟಪ, ಬೆಂಗಳೂರು ಇಂಟರ್‌ ನ್ಯಾಷನಲ್ ಸೆಂಟರ್, ವೈಟ್‌ಫೀಲ್ಡ್‌ನಲ್ಲಿರುವ ವಸ್ತುಪ್ರದರ್ಶನ ಕೇಂದ್ರಗಳ ರೀತಿಯ ಹಲವರು ಜಾಗಗಳನ್ನು ಗುರುತಿಸಲಾಗಿದೆ ಎಂದರು.

ಕೋವಿಡ್‌– 19 ಪ್ರಕರಣ ನಿಯಂತ್ರಣಕ್ಕೆ ಬಾರದೆ ಪರಿಸ್ಥಿತಿ ಬಿಗಡಾಯಿಸಿದರೆ ರಿವರ್ಸ್ ಕ್ವಾರಂಟೈನ್‌ ಅನಿವಾರ್ಯ. ಸೋಂಕು ಜಾಸ್ತಿಯಾಗಿರುವ ದೇಶಗಳಲ್ಲಿ ಸೋಂಕಿತ ವ್ಯಕ್ತಿ ಆರೋಗ್ಯಕರವಾಗಿದ್ದರೆ ಮನೆಯಲ್ಲೇ ಪ್ರತ್ಯೇಕವಾಗಿ ಇರಲು ಸೂಚಿಸಲಾಗುತ್ತಿದೆ. ಆ ರೀತಿಯ ಕ್ರಮಗಳನ್ನೂ ಬೆಂಗಳೂರಿನಲ್ಲೂ ಕೈಗೊಳ್ಳಲಾಗುತ್ತದೆ. ಪರಿಸ್ಥಿತಿ ಆ ಮಟ್ಟಕ್ಕೆ ಹೋಗದಂತೆ ತಡೆಯುವುದು ಜನರ ಕೈಯಲ್ಲೇ ಇದೆ ಎಂದರು.

ಅಂತೆಯೇ ಕಂಟೈನ್ಮೆಂಟ್‌ ವಲಯದ ಮಾರ್ಗಸೂಚಿ ಬದಲಾವಣೆ ಆಗಿದೆ. ಮೊದಲಿನಂತೆ ಸೋಂಕಿತರು ವಾಸವಿದ್ದ ಇಡೀ ಪ್ರದೇಶವನ್ನು ಸೀಲ್‌ಡೌನ್‌ ಮಾಡುತ್ತಿಲ್ಲ. ಸದ್ಯ ಸೋಂಕಿತರ ಮನೆ ಅಥವಾ ಅವರ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕಂಟೈನ್ಮೆಂಟ್‌ ವಲಯವೆಂದು ಪರಿಗಣಿಸಲಾಗುತ್ತಿದೆ. ಹೀಗಾಗಿಯೇ ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆ ಜಾಸ್ತಿಯಾಗಿದೆ. ಇದನ್ನು ನೋಡಿ ಜನರು ಭಯಪಡುವ ಅಗತ್ಯವಿಲ್ಲ. ಕೊರೊನಾ ಸೋಂಕು ಸಮುದಾಯಕ್ಕೆ ಹರಡದಂತೆ ಎಚ್ಚರಿಕೆ ವಹಿಸಲಾಗಿದೆ'' ಎಂದು ತಿಳಿಸಿದರು. 

ಇನ್ನು ರಾಜಧಾನಿ ಬೆಂಗಳೂರು ನಗರದಲ್ಲಿ ಪ್ರತಿ ದಿನ 2 ಸಾವಿರ ಮಂದಿಗೆ ಕೊರೋನಾ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ. ಹೊರ ಜಿಲ್ಲೆಗಳಿಂದ ಹೆಚ್ಚಿನ ಗಂಟಲು ದ್ರವದ ಮಾದರಿಗಳು ಬಂದಾಗ ನಗರದಿಂದ ಪರೀಕ್ಷೆಗೆ ಕಳುಹಿಸಿದವರ ವರದಿ ಬರುವುದು 2-3 ದಿನ ತಡವಾಗುತ್ತಿದೆ. ವೈದ್ಯಕೀಯ ಪರೀಕ್ಷಾ ವರದಿ ಬರುವ ಮುನ್ನವೇ ಸೋಂಕಿತರಿಂದ ಬೇರೆಯವರಿಗೆ ಸೋಂಕು ಹರಡುವ ಸಾಧ್ಯತೆಗಳು ಜಾಸ್ತಿ ಇವೆ. ಇದನ್ನು ತಡೆಯಲು ಪ್ರಕರಣ ಪತ್ತೆಯಾದ ಕೂಡಲೇ ಸೋಂಕಿತರಿಗೆ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸೋಂಕಿತರು ಪಾಲಿಕೆಗೆ ಮಾಹಿತಿ ನೀಡಿದರೆ ತಕ್ಷಣ ಆಸ್ಪತ್ರೆಗೆ ದಾಖಲಿಸಲು ಅನುಕೂಲವಾಗುತ್ತದೆ ಎಂದು ಅನಿಲ್‌ಕುಮಾರ್‌ ತಿಳಿಸಿದರು. 

SCROLL FOR NEXT