ರಾಜ್ಯ

ಚಿರು ಅಂತ್ಯಕ್ರಿಯೆ ವೇಳೆ ನಿಯಮ ಉಲ್ಲಂಘನೆ: 59 ದೂರು ದಾಖಲು

Nagaraja AB

ಬೆಂಗಳೂರು: ಇತ್ತೀಚೆಗಷ್ಟೇ ಹೃದಯಾಘಾತದಿಂದ ನಿಧನರಾದ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಕೊರೋನಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ನಗರದ ವಿವಿಧ ಠಾಣೆಗಳಲ್ಲಿ 59 ಪ್ರಕರಣಗಳು ದಾಖಲಾಗಿವೆ.

ನಿಯಮ ಪಾಲಿಸದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರೇ ಸ್ವಯಂಪ್ರೇರಿತವಾಗಿ ಸಿಲಿಕಾನ್ ಸಿಟಿಯ ಜಯನಗರ, ತಲಘಟ್ಟಪುರ, ಜಯನಗರ, ಬನಶಂಕರಿ, ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ರೋಗದ ಹಾವಳಿ ಹೆಚ್ಚಿದ್ದಾಗಲೇ ತೀವ್ರ ಹೃದಯಾಘಾತದಿಂದ ನಟ ಚಿರಂಜೀವಿ ಸರ್ಜಾ ಅವರು ಜೂ.7 ರಂದು ಕೊನೆಯುಸಿರೆಳಿದಿದ್ದರು.
ಏಕಾಏಕಿ ನಟನ ಸಾವು ಸ್ಯಾಂಡಲ್‌ವುಡ್ ಸೇರಿ ಕರುನಾಡಿಗೆ ಬರ ಸಿಡಿಲು ಬಡಿದಂತಾಗಿತ್ತು. ಅವರ ಪಾರ್ಥಿವ ಶರೀರವನ್ನು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರಿಸಲಾಗಿತ್ತು. 

ಕೇವಲ 39 ವರ್ಷದಲ್ಲಿ ಚಿರಂಜೀವಿ ತಮ್ಮ ಜೀವನಕ್ಕೆ ವಿದಾಯ ಹೇಳಿದ್ದರಿಂದ ಆಘಾತಕೊಳ್ಳಗಾದ ಅಭಿಮಾನಿ ದಂಡು ಸೇರಿ ಸ್ಯಾಂಡಲ್ ವುಡ್ ಕಲಾವಿದರು, ರಾಜಕೀಯ ದುರೀಣರು ಅವರಿಗೆ ಅಂತಿಮ ನಮನ ಸಲ್ಲಿಸಿದರು. 

ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅಸಂಖ್ಯಾತ ಜನರು ಪಾರ್ಥಿವ ಶರೀರ ವೀಕ್ಷಿಸಿದ್ದರು. ಹೀಗಾಗಿ ರಾಜ್ಯ ಸರ್ಕಾರ ಸೂಚಿಸಿದ್ದ ಕೊರೊನಾ ರೋಗ ನಿಯಂತ್ರಣದ ನಿಯಮ‌ ಉಲ್ಲಂಘಿಸಿದ ಆರೋಪದಡಿ ವಿವಿಧ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ‌.

ಜೂ.8 ರಂದು ದಕ್ಷಿಣ ತಾಲೂಕು ನೆಲಗುಳಿ ಗ್ರಾಮದಲ್ಲಿರುವ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರು ಅಂತ್ಯ ಸಂಸ್ಕಾರ ಕಾರ್ಯ ನೆರವೇರಿತ್ತು. ಕೊರೋನಾ ನಿಯಮ ಉಲ್ಲಂಘಿಸಿದ್ದರಿಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

SCROLL FOR NEXT