ರಾಜ್ಯ

ಹೆಚ್ಚಿದ ಕೊರೋನಾ ಭೀತಿ: ವಿಮಾನ ನಿಲ್ದಾಣದಿಂದ ದೂರ ಉಳಿಯುತ್ತಿರುವ ಕ್ಯಾಬ್ ಚಾಲಕರು

Manjula VN

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಮನುಷ್ಯರನ್ನು ಬಲಿಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವೈರಸ್'ನಿಂದ ಭೀತಿಗೊಳಗಾಗಿರುವ ಕ್ಯಾಬ್ ಚಾಲಕರು ಇದೀಗ ವಿಮಾನ ನಿಲ್ದಾಣಗಳಿಗೆ ತೆರಳು ಹಿಂದೇಟು ಹಾಕುತ್ತಿದ್ದಾರೆ. 

ಕೇವಲ ವಿಮಾನ ನಿಲ್ದಾಣದಿಂದ ದೂರ ಉಳಿಯುತ್ತಿರುವುದಷ್ಟೇ ಅಲ್ಲದೆ, ಸ್ವತಃ ಕೊರೋನಾ ವೈರಸ್ ಕುರಿತು ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆಂದು ವರದಿಗಳು ತಿಳಿಸಿವೆ. 

ರಾಜ್ಯದಲ್ಲಿ ಈವರೆಗೂ ನಾಲ್ವರಲ್ಲಿ ವೈರಸ್ ಇರುವುದು ದೃಢಪಟ್ಟಿದ್ದು, ಇದೀಗ ಜನತೆಯಲ್ಲಿ ಆತಂಕವನ್ನು ಹೆಚ್ಚು ಮಾಡಿದೆ. ವೈರಸ್ ಇರುವ ಟೆಕ್ಕಿಯೊಬ್ಬರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದಲ ತೆರಳಿದ್ದು, ಕ್ಯಾಬ್ ಚಾಲಕರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. 

ಈಗಾಗಲೇ ಕೊರೋನಾ ಭೀತಿಯಿಂದಾಗಿ ಶೇ.4-5ರಷ್ಟು ಕ್ಯಾಬ್ ಚಾಲಕರು ಕ್ಯಾಬ್ ಓಡಿಸುವುದನ್ನೇ ನಿಲ್ಲಿಸಿದ್ದಾರೆ. ಇದೀಗ ವ್ಯವಹಾರದಲ್ಲಿ ಶೇ.30-40ರಷ್ಟು ನಷ್ಟ ಕೂಡ ಎದುರಾಗಿದೆ. ಅನಾರೋಗ್ಯ ಪೀಡಿತರಾದ ಜನರನ್ನು ಕ್ಯಾಬ್ ನಲ್ಲಿ ಕೂರಿಸಿಕೊಳ್ಳಲು ಕೆಲ ಚಾಲಕರು ನಿರಾಕರಿಸುತ್ತಿದ್ದಾರೆ. ಇತರೆ ಚಾಲಕರನ್ನು ಕರೆದು ಡ್ರಾಪ್ ಮಾಡುವಂತೆ ತಿಳಿಸುತ್ತಿದ್ದಾರೆಂದು ಓಲಾ-ಉಬರ್ ಟ್ಯಾಕ್ಸಿ ಚಾಲಕ ಪಾಷಾ ಎಂಬುವವರು ಹೇಳಿದ್ದಾರೆ.
 
ಚಾಲಕ ಗಂಗಾಧರ್ ಹೆಚ್.ಎನ್ ಎಂಬುವವರು ಮಾತನಾಡಿ, ವಿಮಾನ ನಿಲ್ದಾಣಕ್ಕೆ ತೆರಳುವುದನ್ನೇ ನಿಲ್ಲಿಸಿ ಬಿಟ್ಟಿದ್ದೇನೆ. ಕುಟುಂಬದಲ್ಲಿ ದುಡಿಯುವ ಕೈ ನನ್ನದೇ ಆಗಿದ್ದು, ನನ್ನ ಸುರಕ್ಷತೆ ಅತ್ಯಂತ ಮುಖ್ಯವಾಗಿದೆ. ನಗರದೊಳಗಷ್ಟೇ ಕ್ಯಾಬ್ ಚಾಲನೆ ಮಾಡುತ್ತಿದ್ದೇನೆ. ಅದರಲ್ಲೂ ಕಿಟಕಿ ಬಾಗಿಲುಗಳನ್ನು ಬಂದ್ ಮಾಡಿರುತ್ತೇನೆಂದು ತಿಳಿಸಿದ್ದಾರೆ. 

ಕ್ಯಾಬ್ ನಲ್ಲಿ ಹೆಚ್ಚು ಮಾಸ್ಕ್ ಗಳನ್ನು ಇಟ್ಟುಕೊಂಡಿದ್ದೇನೆ. ಡ್ರಾಪ್ ಕೇಳಿಕೊಂಡು ಬರುವ ಪ್ರಯಾಣಿಕರಿಗೆ ಇಲ್ಲ ಎನ್ನುವುದಿಲ್ಲ. ಅನಾರೋಗ್ಯ ಇರುವುದು ಕಂಡು ಬಂದಿದ್ದೇ ಆದರೆ, ಅವರಿಗೆ ಮಾಸ್ಕ್ ನೀಡುತ್ತಿದ್ದೇನೆಂದು ಮತ್ತೊಬ್ಬ ಚಾಲಕ ಜಯಂತ್ ಎಂಬುವವರು ಹೇಳಿದ್ದಾರೆ. 

SCROLL FOR NEXT