ರಾಜ್ಯ

ಕೋವಿಡ್ -19: ಶಂಕಿತ ರೋಗಿಗಳನ್ನು ದಾಖಲಿಸಿಕೊಳ್ಳುವಂತೆ ಉಡುಪಿ ಜಿಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ಸೂಚನೆ

Raghavendra Adiga

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಖಾಸಗಿ ಆಸ್ಪತ್ರೆಗಳಿಗಳಲ್ಲಿ ಎರಡು ಹಾಸಿಗೆಯೊಂದಿಗಿನ ಪ್ರತ್ಯೇಕ ವಾರ್ಡ್‌ಗಳನ್ನು ವ್ಯವಸ್ಥೆ ಮಾಡುವಂತೆ ಸೂಚಿಸಿರುವ ಜಿಲ್ಲಾಧಿಕಾರಿ ಜಿ ಜಗದೀಶ್‍ ಅವರು, ಕೋವಿಡ್ -19 (ಕೊರೊನವೈರಸ್‍) ರೋಗಲಕ್ಷಣಗಳನ್ನು ಹೊಂದಿರುವ ಜನರು ಆಸ್ಪತ್ರೆಗೆ ಬಂದರೆ ನಿರಾಕರಿಸದೆ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದ್ದಾರೆ.

ಕೊವಿದ್‍ -19 ರೋಗಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಹತ್ತು ಹಾಸಿಗೆಗಳು ಮತ್ತು ತಾಲೂಕು ಆಸ್ಪತ್ರೆಯಲ್ಲಿ ಐದು ಹಾಸಿಗೆಗಳು ಅಲ್ಲದೆ, ಮಣಿಪಾಲ ಕಸ್ತೂರ್ ಬಾ ಆಸ್ಪತ್ರೆಯಲ್ಲಿ 10 ಹಾಸಿಗೆಗಳನ್ನು ನಿಗದಿಪಡಿಸಲಾಗಿದೆ. ಇದಲ್ಲದೆ, ಹೊಸ ಗ್ರಂಥಾಲಯ ಕಟ್ಟಡದಲ್ಲಿ ಮೂವತ್ತು ಹಾಸಿಗೆಗಳನ್ನು ಹೊಂದಿರುವ ಪ್ರತ್ಯೇಕ ವಾರ್ಡ್ ಸ್ಥಾಪಿಸಲಾಗುವುದು ಎಂದು ಜಗದೀಶ್‍ ತಿಳಿಸಿದ್ದಾರೆ. 

ವಿದೇಶಗಳಿಂದ ಸುಮಾರು 200 ಜನರು ಜಿಲ್ಲೆಗೆ ಆಗಮಿಸಿದ್ದಾರೆ. ಇವರೆಲ್ಲರನ್ನೂ ಮನೆಗಳಲ್ಲೇ ಸಂಪರ್ಕ ತಡೆಗಳಲ್ಲಿ ಇರಿಸಲಾಗಿದೆ. ಸಂಪರ್ಕ ತಡೆಯನ್ನು ಉಲ್ಲಂಘಿಸುವ ಯಾರೇ ಆದರೂ ಅವರನ್ನು ಬಂಧಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ. 

ಕಾಸರ್‌ಗೋಡು ನಿವಾಸಿಯೊಬ್ಬರಿಗೆ ಕೊವಿದ್‍-19 ಸೋಂಕು ದೃಢಪಟ್ಟಿದ್ದು, ಅವರೊಂದಿಗೆ 13 ಜನರು ಅದೇ ವಿಮಾನದಲ್ಲಿ ಮಂಗಳೂರಿನಲ್ಲಿ ಇಳಿದಿದ್ದಾರೆ ಎನ್ನಲಾಗಿದೆ. 

ಜನರು ತುರ್ತು ಕೆಲಸಗಳನ್ನು ಹೊರತುಪಡಿಸಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬಾರದು. ವಿಹಾರ, ಹಬ್ಬಗಳು, ಯಕ್ಷಗಾನ ಪ್ರದರ್ಶನ, ಮದುವೆ ಮತ್ತು ಜಾತ್ರೆಗಳಿಗೆ ಹೋಗಬಾರದು ಎಂದು ಅವರು ಸಲಹೆ ನೀಡಿರುವ ಜಿಲ್ಲಾಧಿಕಾರಿಯವರು, ಈ ನಿಯಮಗಳನ್ನು ಉಲ್ಲಂಘಿಸುವವರನ್ನು ಬಂಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

SCROLL FOR NEXT