ರಾಜ್ಯ

ಯು.ಎ.ಇ. ಕನ್ನಡಿಗರೊಂದಿಗೆ ಮುಖ್ಯಮಂತ್ರಿಗಳ ವಿಡಿಯೋ ಸಂವಾದ: ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವ ಭರವಸೆ

Srinivas Rao BV

ಬೆಂಗಳೂರು: ಕೋವಿಡ್ 19 ನಿಂದ ತೊಂದರೆಗೀಡಾದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ವೀಡಿಯೋ ಸಂವಾದ ನಡೆಸಿದರು.

ಯು.ಎ.ಇ. ಯಲ್ಲಿ ತೊಂದರೆಗೆ  ಸಿಲುಕಿರುವ ಅನಿವಾಸಿ ಕನ್ನಡಿಗರು ಮಾತನಾಡಿ ದುಬೈ ನಿಂದ ಬರುವವರಿಗೆ ಕೂಡಲೇ ವಿಮಾನ ವ್ಯವಸ್ಥೆ,ಅದರಲ್ಲೂ ಮಂಗಳೂರಿಗೆ ಹೆಚ್ಚಿನ ವಿಮಾನ ವ್ಯವಸ್ಥೆ ಕಲ್ಪಿಸಬೇಕು.

ಈಗಾಗಲೇ ಯು.ಎ.ಇ ನಲ್ಲಿ ಸಾಕಷ್ಟು ಜನ ನಿರುದ್ಯೋಗಿಗಳಾಗಿದ್ದು, ರಾಜ್ಯಕ್ಕೆ ಬರಲು ಸಾಧ್ಯವಾಗದೇ ಇದ್ದವರಿಗೆ ಆರ್ಥಿಕವಾಗಿ ನೆರವಾಗಬೇಕು. ಕಾರ್ಮಿಕರಿಗೆ ಉಚಿತ ಕ್ವಾರಂಟೈನ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
 
ಯು.ಎ.ಇ ಕನ್ನಡಿಗರ ಸಮಸ್ಯೆಗಳನ್ನು ಆಲಿಸಿದ ಮುಖ್ಯಮಂತ್ರಿಗಳು, ವೀಸಾ ಅವಧಿ ಮುಗಿದ  ನಿರೋದ್ಯೋಗಿಗಳು, ರೋಗಿಗಳು ಇತರೆ ಕಾರಣಗಳಿಂದ ವಾಪಸ್ ಬರಲಾಗದೆ ಸಂಕಷ್ಟಕ್ಕೆ ಸಿಲುಕಿರುವವರನ್ನು ತಾಯ್ನಾಡಿಗೆ ಕರೆತರಲು ಸರ್ಕಾರ ಈಗಾಗಲೇ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.

ಕನ್ನಡಿಗರನ್ನು ಕರ್ನಾಟಕಕ್ಕೆ ವಾಪಸ್ ಕರೆತರಲು ವಿಮಾನದ ವ್ಯವಸ್ಥೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ವಿಶೇಷ ವಿಮಾನಯಾನದ ವ್ಯವಸ್ಥೆ ಮಾಡಲಾಗಿದೆ. ಅನಿವಾಸಿ ಕನ್ನಡಿಗರ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಎಲ್ಲಾ ಪ್ರಯತ್ನ ಮಾಡಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಯು.ಎ.ಇ. ಯಿಂದ ಹಿಂದಿರುಗಿ ಬರುವ ಎಲ್ಲರೂ 14 ದಿನಗಳ ಕಾಲ ಕ್ವಾರೆಂಟೈನ್ಗೆ ಒಳಪಡಲು ಸರಕಾರದ ಜೊತೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದ ಅವರು  ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಇರುವ ಹೊಟೇಲ್ಗಳಲ್ಲಿ ಕ್ವಾರಂಟೈನ್ಗೆ ಈಗಾಗಲೇ ವ್ಯವಸ್ಥೆ ಕಲ್ಪಿಸಲಾಗಿದೆ.

ಮಂಗಳೂರಿನಲ್ಲಿಯೂ ಆರೋಗ್ಯ ತಪಾಸಣೆ ಹಾಗೂ ಕ್ವಾರಂಟೈನ್ ಮಾಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಸೌಲಭ್ಯ ಇರುವ ಹೊಟೇಲ್ಗಳಲ್ಲಿ ಕ್ವಾರಂಟೈನ್ ಆಗುವ ಇಚ್ಛೆ ಇದ್ದವರು ತಾವೇ ಹಣ ಪಾವತಿಸಿ ಇರಬಹುದು. ತೊಂದರೆಗೆ ಸಿಲುಕಿರುವ ಕನ್ನಡಿಗರು ಆತಂಕಕ್ಕೆ ಒಳಗಾಗದೆ, ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಬೇಕು. ಕನ್ನಡಿಗರನ್ನು ರಾಜ್ಯಕ್ಕೆ ಕರೆತರಲು ಹಾಗೂ ಅವರ ನೆರವಿಗೆ ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ಆಶ್ವಾಸನೆ ನೀಡಿದರು. 

ಅಲ್ಲಿಯೇ ಉಳಿದುಕೊಂಡಿರುವ ಕನ್ನಡಿಗರೂ ಸಹ ಹತಾಶರಾಗದೆ ದೃಢ ಮನಸ್ಸಿನಿಂದ ಪರಿಸ್ಥಿತಿಯನ್ನು ಎದುರಿಸಿ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಆರೋಗ್ಯ ಕಾಪಾಡಿಕೊಳ್ಳಬೇಕು. ಕರ್ನಾಟಕದಲ್ಲಿರುವ ಬಂಧು-ಬಳಗದ ಯೋಗಕ್ಷೇಮ ಸರ್ಕಾರದ ಜವಾಬ್ದಾರಿ ಎಂದು ಆತ್ಮವಿಶ್ವಾಸ ತುಂಬಿದ ಮುಖ್ಯಮಂತ್ರಿಗಳು, ಇದಕ್ಕಾಗಿ ನಮ್ಮ ಸರ್ಕಾರ ಶ್ರಮಿಸುತ್ತಿದೆ. ಶೀಘ್ರವೇ ಈ ಕರೋನಾ ಸಂಕಷ್ಟದಿಂದ ಪಾರಾಗುವ ಆಶಾ ಭಾವವಿರಲಿ.   ನಿಮಗೆ ತೊಂದರೆ ತೊಡಕುಗಳೇನಾದರೂ ಎದುರಾದಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆದು ಅದನ್ನು ನಿವಾರಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು. ಅಂತೆಯೇ ರಾಜ್ಯ ಸರ್ಕಾರ ತನ್ನ ಹಂತದಲ್ಲಿ ಕೈಗೊಳ್ಳಬಹುದಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

SCROLL FOR NEXT