ರಾಜ್ಯ

ರಕ್ಷಣೆ, ಬಾಹ್ಯಾಕಾಶ, ವಿಮಾನಯಾನ ಕ್ಷೇತ್ರದಲ್ಲಿ ಖಾಸಗಿ ಪಾಲುದಾರಿಕೆಯಿಂದ ಅನುಕೂಲ: ಸಿಎಂ ಯಡಿಯೂರಪ್ಪ

Lingaraj Badiger

ನವದೆಹಲಿ: ಕೊವಿಡ್-೧೯ ಸಂಕಷ್ಟ ಸಂದರ್ಭದಲ್ಲಿ ಸ್ವಾವಲಂಬಿ ಭಾರತಕ್ಕಾಗಿ ಕೇಂದ್ರ ಸರ್ಕಾರ ಘೋಷಿಸಿರುವ ನಾಲ್ಕನೇ ದಿನದ ಪರಿಹಾರ ಕ್ರಮಗಳಿಂದ ರಾಜ್ಯಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಹಲವಾರು ಕ್ಷೇತ್ರಗಳಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಒತ್ತು ನೀಡಲಾಗುತ್ತಿದೆ. ಹಲವಾರು ಯೋಜನೆಗಳು, ಮತ್ತು ಹಣಕಾಸು ಸಹಾಯ ರಾಜ್ಯಕ್ಕೆ ಹೆಚ್ಚು ಲಾಭ ತರಲಿದೆ. ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲಿದ್ದು, ಖನಿಜ ವಲಯದಲ್ಲಿ ತರುತ್ತಿರುವ ಅಮೂಲಾಗ್ರ ಬದಲಾವಣೆ ರಾಜ್ಯದ ಖನಿಜ ನೀತಿಗೆ ಪೂರಕವಾಗಲಿದೆ ಎಂದಿದ್ದಾರೆ.

ರಾಜ್ಯದಲ್ಲಿ ಹಲವಾರು ಖನಿಜ ನಿಕ್ಷೇಪಗಳಿದ್ದು, ಈಗ ಅವುಗಳ ಗಣಿಗಾರಿಕೆ ಮಾಡಲು ಖಾಸಗಿ ಕ್ಷೇತ್ರಕ್ಕೆ ಅವಕಾಶ ಕಲ್ಪಿಸಿಕೊಡಲಿದೆ. ಅದರಲ್ಲೂ ಈಗಿರುವ ಖನಿಜ ಸಂಬಂಧಪಟ್ಟ ಕಾಯಿದೆಗಳು ರಾಜ್ಯಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಲಿದೆ. ಈ ಕ್ಷೇತ್ರದ ಗಣಿಗಾರಿಕೆ ಅವಕಾಶಗಳ ನಿರ್ಬಂಧಗಳು ಸಡಿಲಗೊಳ್ಳಲಿದ್ದು, ಬಂಡವಾಳ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರಲಿದೆ ಎಂದು ಹೇಳಿದ್ದಾರೆ. 

ದೇಶದ ರಕ್ಷಣಾ ವಲಯ, ಬಾಹ್ಯಾಕಾಶ, ನಾಗರಿಕ ವಿಮಾನಯಾನ, ಅಂತರಿಕ್ಷ ಯಾನ, ಮತ್ತು ಅಂತರಿಕ್ಷ ವಲಯಗಳಲ್ಲಿ ಹೂಡಿಕೆ ಹೆಚ್ಚಾದರೆ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕಕ್ಕೆ ಅನುಕೂಲವಾಗಲಿದೆ. ದಾವೋಸ್ ಪ್ರವಾಸದಲ್ಲಿ ಹಲವಾರು ಬಾಹ್ಯಾಕಾಶ ಮತ್ತು ರಕ್ಷಣಾ ವಲಯದ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ತಮ್ಮ ಇಚ್ಚೆ ವ್ಯಕ್ತಪಡಿಸಿದ್ದು, ಈಗ ಈ ಕಂಪನಿಗಳ ಯೋಜನೆಗಳು ಸಾಕಾರಗೊಳ್ಳಲಿವೆ ಎಂದು ಯಡಿಯೂರಪ್ಪ ಆಶಯ ವ್ಯಕ್ತಪಡಿಸಿದ್ದಾರೆ.

SCROLL FOR NEXT