ಬೆಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಿಲುಕಿರುವ ಹೊರರಾಜ್ಯದ ಕಾರ್ಮಿಕರನ್ನು ಅವರ ತವರೂರಿಗೆ ಕಳುಹಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ನೈಋತ್ಯ ರೈಲ್ವೆ ಸಿಬ್ಬಂದಿ, ಮಾರ್ಗಮಧ್ಯದಲ್ಲಿ ಗರ್ಭಿಣಿಯೋರ್ವರ ಪ್ರಸವ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.
ಭಾನುವಾರ ದೆಹಲಿಗೆ ಪ್ರಯಾಣ ಬೆಳೆಸಿದ್ದ ರೈಲಿನಲ್ಲಿದ್ದ ಗರ್ಭಿಣಿಗೆ ನ್ಯೂ ಡೆಲ್ಲಿ ಬಳಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರಿಗೆ ರೈಲ್ವೆ ಸಿಬ್ಬಂದಿಯಾದ ಎಸ್. ರವಿ, ರವಿ ರಂಜನ್ ಕುಮಾರ್ ಮತ್ತು ಪಂಕಜ್ ಜಾ ಅವರು ಇತರ ಪ್ರಯಾಣಿಕರ ನೆರವಿನೊಂದಿಗೆ ಸುರಕ್ಷಿತ ಪ್ರಸವಕ್ಕೆ ವ್ಯವಸ್ಥೆ ಕಲ್ಪಿಸಿದ್ದರು. ಈ ಮಹಿಳೆ ಆರೋಗ್ಯಪೂರ್ಣ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಭಾನುವಾರ ರಾಜ್ಯದ ವಿವಿಧೆಡೆಯಿಂದ 12 ಶ್ರಮಿಕ್ ರೈಲುಗಳು ಪ್ರಯಾಣ ಬೆಳೆಸಿವೆ. ಭಾನುವಾರ ನಸುಕಿನ 1.45ರ ಸುಮಾರಿಗೆ ಒಂದು ರೈಲು ಕುರ್ದಾ ರಸ್ತೆಗೆ ಸಂಚಾರ ಆರಂಭಿಸಿತ್ತು.ಉಳಿದಂತೆ ಬೆಂಗಳೂರಿನಿಂದ ದರ್ಬಾಂಗ (ಬಿಹಾರ), ಅರರಿಯಾ (ಬಿಹಾರ) ಮುಜಾಫರ್ ನಗರ (ಬಿಹಾರ), ಬರೌನಿ (ಬಿಹಾರ), ಗೋರಕ್ ಪುರ (ಉತ್ತರಪ್ರದೇಶ), ಕಟಿಹಾರ್ (ಬಿಹಾರ), ಗೋರಕ್ ಪುರ (ಉತ್ತರಪ್ರದೇಶ) ಹೊಸೂರಿಂದ ಬಾಗಲಪುರ (ಬಿಹಾರ), ಬೆಂಗಳೂರು ನಗರದಿಂದ ಭದ್ರಕ್ (ಒಡಿಶಾ)ಗೆ ಎರಡು ರೈಲು ಪ್ರಯಾಣ ಬೆಳೆಸಿದೆ ಎಂದು ಇಲಾಖೆ ಮಾಹಿತಿ ನೀಡಿದೆ.