ರಾಜ್ಯ

ಅಕ್ರಮವಾಗಿ ಮರಳು ಸಾಗಿಸುವಾಗ ರೋಣ ತಾಲೂಕಿನ ಟ್ರಾಕ್ಟರ್ ಚಾಲಕ ಸಾವು

Srinivas Rao BV

ಕೊಪ್ಪಳ: ಕೊರೊನಾ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಭಾನುವಾರ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿದ್ದು ಕರ್ಫ್ಯೂ ಸಹ ಹೇರಲಾಗಿದೆ. ಈ ವೇಳೆ ಅಕ್ರಮವಾಗಿ ಮರಳು ಸಾಗಿಸುವಾಗ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಚಾಲಕ ಮೃತಪಟ್ಟಿದ್ದಾನೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದ ಬಳಿ ಘಟನೆ ನಡೆದಿದ್ದು‌, ಮೃತ ಚಾಲಕನನ್ನು ಗದಗ ಜಿಲ್ಲೆಯ ರೋಣ ತಾಲೂಕಿನ ಗುಳಗುಳಿ ಗ್ರಾಮದ ದೇವೇಂದ್ರಪ್ಪ ಅಲಿಯಾಸ್ ಕುಮಾರ ತಂದೆ ಮಲ್ಲಿಕಾರ್ಜುನ ಕೋಣನ್ನವರ್ (35) ಎಂದು ಗುರುತಿಸಲಾಗಿದೆ. 

ಸ್ಥಳಕ್ಕೆ ಹನುಮಸಾಗರ ಪೊಲೀಸ್ ಠಾಣೆ ಪಿಎಸ್ಐ ಅಮರೇಶ್ ಹುಬ್ಬಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಾಥಮಿಕ ಮಾಹಿತಿ ಕಲೆ ಹಾಕಿರುವ ಪೊಲೀಸರು, ಘಟನೆ ನಸುಕಿನ ಜಾವ 1 ಗಂಟೆ ಸುಮಾರಿಗೆ ನಡೆದಿದ್ದು, ಸುಮಾರು‌ 6 ಜನರು ಅಕ್ರಮವಾಗಿ ಮರಳು ಸಾಗಿಸಲು ಯತ್ನಿಸಿದ್ದಾರೆ ಎಂದು ಅಂದಾಜಿಸಿದ್ದಾರೆ. 

ಭಾನುವಾರದ ಲಾಕ್‌ಡೌನ್ ಹಿನ್ನೆಲೆಯಲ್ಲಿ ತಾಲೂಕು ಗಡಿಭಾಗಗಳಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಇರುವುದರಿಂದ ಪೊಲೀಸರ ಕಣ್ತಪ್ಪಿಸಿ, ಗುಳಗುಳಿ ಹಳ್ಳದ ದಡದಿಂದ ರಸ್ತೆ ಮೇಲೆ ಟ್ರ್ಯಾಕ್ಟರ್ ಹತ್ತಿಸುವಾಗ ಎತ್ತರದ ಪ್ರದೇಶವಾದದ್ದರಿಂದ ಟ್ರ್ಯಾಕ್ಟರ್ ಮುಗುಚಿ ಚಾಲಕ ದೇವೇಂದ್ರಪ್ಪ ಅಲಿಯಾಸ್ ಕುಮಾರ್‌ನ ಮೇಲೆ ಬಿದ್ದು, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ‌ ನೋಡಿದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಕುರಿತು ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT