ರಾಜ್ಯ

ಕೇರಳದ ಮದ್ಯಪ್ರಿಯರಿಂದ ಕರ್ನಾಟಕಕ್ಕೆ ಕೊರೋನಾ ಭೀತಿ: ನದಿಗಳ ಮೂಲಕ ರಾಜ್ಯಕ್ಕೆ ನುಸುಳಿ ಮದ್ಯ ಖರೀದಿ!

Srinivas Rao BV

ಮೈಸೂರು: ಲಾಕ್ ಡೌನ್ ತೆರವುಗೊಳಿಸಿ, ಜನಜೀವನ ಸಾಮಾನ್ಯಕ್ಕೆ ಮರಳುತ್ತಿರುವುದು ಒಂದೆಡೆಯಾದರೆ ಕರ್ನಾಟಕಕ್ಕೆ ಗಡಿ ಭಾಗಗಳಿಂದ ಕೊರೋನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 

ಕೇರಳದ ಕುಡುಕರಿಂದ ಪ್ರಮುಖವಾಗಿ ಕರ್ನಾಟಕಕ್ಕೆ ಕೊರೋನಾಘತದ ಭೀತಿ ಉಂಟಾಗಿದೆ. ಗಡಿ ಪ್ರದೇಶದ ರಸ್ತೆಗಳಲ್ಲಿ ಪೊಲೀಸ್ ಸರ್ಪಗಾವಲಿರುವ ಹಿನ್ನೆಲೆಯಲ್ಲಿ ಕೇರಳದ ಮದ್ಯಪ್ರಿಯರು ಮದ್ಯ ಖರೀದಿಸಲು ಕರ್ನಾಟಕಕ್ಕೆ ನುಸುಳಲು ನದಿಗಳ ಮಾರ್ಗವನ್ನು ಕಂಡುಕೊಂಡಿದ್ದಾರೆ. ಕರ್ನಾಟಕದಲ್ಲಿ ಮದ್ಯ ಅಗ್ಗದ ದರದಲ್ಲಿ ಸಿಗುವುದರಿಂದ ಕೇರಳದಿಂದ ಬೋಟ್ ಗಳಲ್ಲಿ ಜನರು ಆಗಮಿಸಿ ಮದ್ಯ ಖರೀದಿಸುತ್ತಿದ್ದಾರೆ. 

ಕಬಿನಿ ನದಿಯ ವ್ಯಾಪ್ತಿ ಉದ್ದವಿರುವುದರಿಂದ ಗಡಿ ಭಾಗದ ಗ್ರಾಮಗಳಿಗೆ ನುಸುಳಲು ಹಲವಾರು ಪ್ರವೇಶಗಳಿವೆ. ಗಡಿ ಪ್ರದೆಶದ ಸ್ಥಳೀಯರು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕುಡುಕರು ಕರ್ನಾಟಕಕ್ಕೆ ಬಂದು ಕೊರೋನಾ ಹರಡುವ ಸಾಧ್ಯತೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಮೇ.24 ರಂದು ಒಂದೇ ದಿನ ಕೇರಳದಲ್ಲಿ 50 ಪ್ರಕರಣಗಳು ವರದಿಯಾಗಿವೆ. ಈ ನಡುವೆ ಕರ್ನಾಟಕಕ್ಕೆ ಬಂದು ಹೋಗುತ್ತಿರುವ ಕೇರಳದ ಮದ್ಯಪ್ರಿಯರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದರ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಇವರುಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.

ಮೈಸೂರು ಜಿಲ್ಲಾಡಳಿತ ಕೇರಳಿಗರನ್ನು ತಡೆಯಲು ಡಿಬಿ ಕುಪ್ಪೆ ಬೋಟ್ ಪಾಯಿಂಟ್ ಗಳನ್ನು ರದ್ದುಪಡಿಸಲಾಗಿದೆ. ಇದೇ ವೇಳೆ ಗ್ರಾಮಸ್ಥರ ಮನವಿಯ ಮೇರೆಗೆ ಡಿಬಿ ಕುಪ್ಪೆ ಹಾಗೂ ಮಾಚೂರು ಬಳಿ ಇರುವ ಮದ್ಯದ ಅಂಗಡಿಗಳಿಗೆ ಕಂದಾಯ ಅಧಿಕಾರಿಗಳು, ಅಬಕಾರಿ ಅಧಿಕಾರಿಗಳು ಬೀಗ ಜಡಿದಿದ್ದಾರೆ. 

SCROLL FOR NEXT