ರಾಜ್ಯ

ಬೆಂಗಳೂರಿಗೆ ಮಳೆ; ಶೀಘ್ರದಲ್ಲೆ ಮುಂಗಾರು ಪ್ರವೇಶ: ಮಹಾ ನಗರ ಪಾಲಿಕೆ ಹೇಗೆ ಸಜ್ಜಾಗುತ್ತಿದೆ?

Sumana Upadhyaya

ಬೆಂಗಳೂರು: ಕಳೆದೆರಡು ದಿನಗಳಿಂದ ನಗರದಲ್ಲಿ ಸಾಯಂಕಾಲ ಹೊತ್ತು ಗುಡುಗು, ಗಾಳಿ ಸಹಿತ ಮಳೆ ತೀವ್ರವಾಗಿದ್ದು, ಜೂನ್ ಮೊದಲ ವಾರದಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶವಾಗಲಿರುವ ಹಿನ್ನೆಲೆಯಲ್ಲಿ ಕೋವಿಡ್-19 ಕರ್ತವ್ಯದ ಜೊತೆಗೆ ಮುಂಗಾರು ಸಿದ್ದತೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತೊಡಗಿದೆ.

ಕಳೆದ ಪರಿಶೀಲನಾ ಸಭೆಯಲ್ಲಿ ಬೆಸ್ಕಾಂ, ಬಿಡಬ್ಲ್ಯುಎಸ್ಎಸ್ ಬಿ ಮತ್ತು ಬಿಬಿಎಂಪಿ ಸಮನ್ವಯ ಮಾದರಿಯಲ್ಲಿ ಕೆಲಸ ಮಾಡಲಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಬಿಎಂಪಿಯಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂಗಾರು ಪೂರ್ವಸಿದ್ದತಾ ಯೋಜನೆ ಬಗ್ಗೆ ಕೇಳಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಮೇಯರ್ ಜಿ ಗೌತಮ್, ಕೆರೆಗಳು, ಪ್ರಮುಖ ರಸ್ತೆಗಳು ಮತ್ತು ಯೋಜನಾ ವಿಭಾಗಗಳ ಕೆಲಸಕ್ಕೆ ಸುಮಾರು 70 ಮಂದಿಯನ್ನು ನಿಯೋಜಿಸಲಾಗಿದೆ. ಪ್ರವಾಹ ಪೀಡಿತ ಸ್ಥಳಗಳ ಜನರಿಗೆ ತಾತ್ಕಾಲಿಕ ವಸತಿ ಕಲ್ಪಿಸಲು ಬಿಬಿಎಂಪಿ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿದೆ ಎಂದು ಹೇಳಿದರು.

ಬಿಬಿಎಂಪಿ ಆಯುಕ್ತ ಬಿ ಎಚ್ ಅನಿಲ್ ಕುಮಾರ್, ತಾತ್ಕಾಲಿಕ ಶಿಬಿರ ಕೇಂದ್ರಗಳಾಗಿ ಬಳಕೆ ಮಾಡದಿರುವ ಕಮ್ಯುನಿಟಿ ಹಾಲ್ ಗಳನ್ನು ಬಳಸಿಕೊಳ್ಳಲಾಗುವುದು. ಸಿಬ್ಬಂದಿಗಳನ್ನು ಕೋವಿಡ್ ಮತ್ತು ಮಾನ್ಸೂನ್ ಕೆಲಸಗಳಿಗೆ ವಿಭಾಗಿಸಲಾಗಿದೆ. ನೀರು ನಿಲುಗಡೆ ಮತ್ತು ಮರ ಬಿದ್ದ ಬಗ್ಗೆ ಸಂಬಂಧಪಟ್ಟ ದೂರುಗಳನ್ನು ಆಲಿಸಲು ವಲಯ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಕಳೆದ ಮೂರು ದಿನಗಳಲ್ಲಿ ಬಿಬಿಎಂಪಿ ಕಂಟ್ರೋಲ್ ರೂಂಗೆ 120ಕ್ಕೂ ಹೆಚ್ಚು ದೂರುಗಳು ಬಂದಿದ್ದು ಅವುಗಳಲ್ಲಿ ಶೇಕಡಾ 90ರಷ್ಟು ಮರಗಳು ಬಿದ್ದ ದೂರುಗಳೇ ಆಗಿವೆ. ನೀರು ನಿಲುಗಡೆ ಬಗ್ಗೆ ಕೆಲ ದೂರುಗಳು ಮಾತ್ರ ಬಂದಿವೆಯಷ್ಟೆ.

ನಗರದಲ್ಲಿ ಬಿದ್ದ ಮಳೆ 17.6 ಮಿಲಿ ಮೀಟರ್: ನಿನ್ನೆ ಸಾಯಂಕಾಲ 5.30ರ ಹೊತ್ತಿಗೆ ಬೆಂಗಳೂರಿನಲ್ಲಿ 17.6 ಮಿಲಿ ಮೀಟರ್ ಮಳೆಯಾಗಿದೆ. ಕಾಡು ಮಲ್ಲೇಶ್ವರದಲ್ಲಿ ಆಟೋ, ಕಾರುಗಳ ಮೇಲೆ ಮರಗಳು ಬಿದ್ದ ಬಗ್ಗೆ ದೂರುಗಳು ಬಂದವು. ಸ್ಯಾಂಕಿ ರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರ, ಗಾಂಧಿನಗರ, ಜೆ.ಪಿ ನಗರ 2ನೇ ಹಂತ, ಜಯನಗರ 4ನೇ ಟಿ ಬ್ಲಾಕ್ ನಲ್ಲಿನ ನಿವಾಸಿಗಳು ಮರ ಬಿದ್ದ ಬಗ್ಗೆ ದೂರುಗಳನ್ನು ನೀಡಿದ್ದಾರೆ ಎಂದು ಆಯುಕ್ತರು ಮಾಹಿತಿ ನೀಡಿದರು.

SCROLL FOR NEXT