ರಾಜ್ಯ

 ಲಾಕ್ ಡೌನ್ ಸಮೀಕ್ಷೆ: ರಾಜ್ಯದಲ್ಲಿ 10 ಕೆಲಸಗಾರರ ಪೈಕಿ ಏಳು ಜನರ ಉದ್ಯೋಗಕ್ಕೆ ಕುತ್ತು!

Nagaraja AB

ಬೆಂಗಳೂರು:ಕೋವಿಡ್-19 ಲಾಕ್ ಡೌನ್ ವೇಳೆಯಲ್ಲಿ ರಾಜ್ಯದಲ್ಲಿ 10 ಕೆಲಸಗಾರರ ಪೈಕಿಯಲ್ಲಿ ಏಳು ಮಂದಿ (ಶೇ. 72) ರಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ಹತ್ತು ನಾಗರಿಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಅಜಿಂ ಪ್ರೇಮ್ ಜೀ ವಿಶ್ವವಿದ್ಯಾನಿಲಯ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ದೇಶದಲ್ಲಿನ 12 ರಾಜ್ಯಗಳಲ್ಲಿ 5 ಸಾವಿರ ಕೆಲಸಗಾರರನ್ನು ಫೋನ್ ಮೂಲಕ ಸಂಪರ್ಕಿಸಲಾಗಿದ್ದು, ಕೋವಿಡ್- 19 ಲಾಕ್ ಡೌನ್ ಹೇರಿದ ಬಳಿಕ ಉದ್ಯೋಗ, ಜೀವನ ಹಾಗೂ ಸರ್ಕಾರದ ಪರಿಹಾರ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಲಾಗಿದೆ ಎಂದು ವಿಶ್ವವಿದ್ಯಾನಿಲಯ ಹೇಳಿಕೆಯಲ್ಲಿ ತಿಳಿಸಿದೆ.

ರಾಜ್ಯದಲ್ಲಿ ಸ್ವಯಂ ಉದ್ಯೋಗಿಗಳು, ಗುತ್ತಿಗೆ ಹಾಗೂ ಸಂಬಳದಾರರನ್ನು ಸಮೀಕ್ಷೆಗೊಳಪಡಿಸಲಾಗಿದೆ. ಶೇ. 76 ರಷ್ಟು ನಗರ ಪ್ರದೇಶದ ಕಾರ್ಮಿಕರು ಮತ್ತು ಶೇ. 66 ರಷ್ಟು ಗ್ರಾಮೀಣ ಪ್ರದೇಶದ ಕೆಲಸಗಾರರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಸರ್ವೇಯಲ್ಲಿ ಹೇಳಲಾಗಿದೆ. 

ಕೃಷಿಯೇತರ ಸ್ವಯಂ ಉದ್ಯೋಗಿಗಳು, ಕೂಲಿ ಕಾರ್ಮಿಕರು , ಈಗಲೂ ಕೆಲಸ ಮಾಡುತ್ತಿರುವವರ ವಾರದ ಆದಾಯದಲ್ಲಿ ಶೇ, ಮೂರನೇ ಎರಡರಷ್ಚು ಭಾಗ ಕಡಿಮೆಯಾಗಿದೆ. ಶೇ. 44 ರಷ್ಟು ಮಂದಿಯ ವೇತನದಲ್ಲಿ ಕಡಿತ ಮಾಡಲಾಗಿದೆ. 10 ಕುಟುಂಬಗಳ ಪೈಕಿಯಲ್ಲಿ 6 ಕುಟುಂಬಗಳಿಗೆ ವಾರಕ್ಕೆ ಬೇಕಾಗುವಷ್ಟು ಅತ್ಯವಶ್ಯಕ ವಸ್ತುಗಳನ್ನು ಖರೀದಿಸಲು ಹಣವೇ ಸಿಗುತ್ತಿಲ್ಲ ಎಂಬುದು ಕಂಡುಬಂದಿದೆ.

ಲಾಕ್ ಡೌನ್ ಹೇರಿದ ಬಳಿಕ ಆರ್ಥಿಕ ಹಾಗೂ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಚೇತರಿಕೆ ಪ್ರಮಾಣ ಕುಸಿದಿದೆ. ಮುಂದಿನ ಆರು ತಿಂಗಳವರೆಗೂ ಪಡಿತರವನ್ನು ಕಟ್ಟಕಡೆಯ ಜನರಿಗೆ ಯಾವುದೇ ಅಡೆತಡೆಯಿಲ್ಲದೆ ಮುಂದುವರೆಸಬೇಕೆಂಬ ಸಲಹೆಗಳು ಕೇಳಿಬಂದಿದೆ. 

ತಿಂಗಳಿಗೆ ಏಳು ಸಾವಿರದಂತೆ ಎರಡು ತಿಂಗಳು ನಗದು ವರ್ಗಾವಣೆ ಮಾಡಬೇಕು, ಮನ್ರೇಗಾದಂತಹ ಯೋಜನೆಗಳ ವಿಸ್ತರಣೆಗೆ ಕ್ರಮ ಕೈಗೊಳ್ಳಬೇಕು, ನಗರ ಉದ್ಯೋಗ ಖಾತ್ರಿ ಯೋಜನೆ ಪರಿಚಯಿಸಬೇಕು, ಮೂಲ ಸೇವೆಗಳು ಮತ್ತಿತರ ಕಡೆಗಳಲ್ಲಿ ಹೂಡಿಕೆ ಮಾಡಬೇಕೆಂಬ ಸಲಹೆಗಳು ಕೂಡಾ ಬಂದಿವೆ.

SCROLL FOR NEXT