ಬೆಂಗಳೂರು: ಎಪಿಎಂಸಿ ಯಾರ್ಡ್ ನಿಂದ ಹೊರಗೆ ಕೃಷಿ ಉತ್ಪನ್ನಗಳನ್ನು ಖರೀದಿಸಲು ಘೋಷಿತ ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ)ಯನ್ನು ಉಲ್ಲೇಖ ಬೆಲೆಯಾಗಿ ಪರಿಗಣಿಸಬೇಕು ಎಂದು ಕರ್ನಾಟಕ ಕೃಷಿ ಆಯೋಗ ಸರ್ಕಾರಕ್ಕೆ ಸಲಹೆ ನೀಡಿದೆ.
ಇತ್ತೀಚೆಗೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿದ ನಂತರ ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಯಾರ್ಡ್ ಗಳಲ್ಲಿ ಬೇಕಾದರೂ ಮಾರಾಟ ಮಾಡಬಹುದು ಅಥವಾ ಹೊರಗೆ ಖಾಸಗಿ ಮಾರುಕಟ್ಟೆಯಲ್ಲಿಯಾದರೂ ಮಾರಾಟ ಮಾಡಬಹುದಾಗಿದೆ.
ಎಪಿಎಂಸಿ ಮಾರುಕಟ್ಟೆ ಹೊರಗೆ ಉತ್ಪನ್ನಗಳನ್ನು ವಹಿವಾಟು ಮಾಡುವ ಉಲ್ಲೇಖ ಬೆಲೆಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ಕನಿಷ್ಠ ಬೆಂಬಲ ಬೆಲೆಯನ್ನು ಉಲ್ಲೇಖ ಬೆಲೆಯೆಂದು ಪರಿಗಣಿಸಬಹುದು ಎಂದು ಆಯೋಗ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ. ಕಾಯ್ದೆಯಲ್ಲಿ ಇದನ್ನು ಸೇರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕೆಂದು ಸಿಎಂ ಅವರನ್ನು ಒತ್ತಾಯಿಸಿದ್ದಾರೆ.
ಪ್ರಮುಖ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸುವಾಗ ಎ 2 + ಎಫ್ಎಲ್ (ಪಾವತಿಸಿದ ವೆಚ್ಚ ಮತ್ತು ಕುಟುಂಬ ಕಾರ್ಮಿಕ ಶುಲ್ಕವನ್ನು ಒಳಗೊಂಡಿರುವ) ಬದಲಿಗೆ ಕೃಷಿ ವೆಚ್ಚವನ್ನು (ಸಿ 2) ಪರಿಗಣಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಆಯೋಗವು ರಾಜ್ಯ ಸರ್ಕಾರವನ್ನು ಕೇಳಿದೆ. ಕೃಷಿ ವೆಚ್ಚವು ರೈತರಿಗೆ ಶೇಕಡಾ 50 ರಷ್ಟು ಆದಾಯವನ್ನು ನೀಡಲು ಭೂಮಿಯಲ್ಲಿನ ಬಂಡವಾಳ ಮತ್ತು ಬಾಡಿಗೆ ವೆಚ್ಚವನ್ನು ಒಳಗೊಂಡಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿ (ಎನ್ಡಿಆರ್ಎಫ್) ಅಡಿಯಲ್ಲಿ ನೀಡಲಾಗುವ ನೈಸರ್ಗಿಕ ವಿಪತ್ತುಗಳಿಂದಾಗಿ ಬೆಳೆ ನಷ್ಟಕ್ಕೆ ಪರಿಹಾರವು ಸಾಕಾಗುವುದಿಲ್ಲ ಮತ್ತು ವಾಣಿಜ್ಯ ಬೆಳೆಗಳಿಗೆ ಹೆಕ್ಟೇರ್ಗೆ 50 ಸಾವಿರ ರೂಪಾಯಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹೆಕ್ಟೇರ್ಗೆ 1 ಲಕ್ಷ ಪರಿಹಾರವನ್ನು ಹೆಚ್ಚಿಸಬೇಕು ಎಂದು ಆಯೋಗದ ವರದಿಯಲ್ಲಿ ತಿಳಿಸಲಾಗಿದೆ.
ಆಯೋಗ ಮಾಡಿರುವ ಶಿಫಾರಸುಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.