ರಾಜ್ಯ

'ಹೃದಯ ಏಸು' ಪದ ಬಳಸಿದ್ದು ಗೊತ್ತಿರಲಿಲ್ಲ, ನನಗೆ ಕೆಟ್ಟ ಹೆಸರು ತರಲು ಪ್ರತಿಭಟನೆ ಮಾಡುತ್ತಿದ್ದಾರೆ: ಸೌಮ್ಯ ರೆಡ್ಡಿ 

Sumana Upadhyaya

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ 'ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ' ಎಂದಿರುವ ಸ್ಥಳದಲ್ಲಿ ಹೃದಯ ಏಸು ಎಂದು ಪ್ರಕಟಿಸಿ ತೀವ್ರ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ತಿದ್ದುಪಡಿ ಮಾಡಿ ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ ಬೆಂಗಳೂರಿನ ಜಯನಗರ ಕ್ಷೇತ್ರದ ಶಾಸಕಿ ಕೆ ಸೌಮ್ಯರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಏನಿದು ಪ್ರಕರಣ: ಜಯನಗರ ಬಡಾವಣೆಯ ಓಂ ಕನ್ನಡ ಮರಿಯಮ್ಮನ ಕರುನಾಡ ಸಂಘ ಮೊನ್ನೆ 22ರಂದು ಭಾನುವಾರ 65ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ಹಮ್ಮಿಕೊಂಡಿತ್ತು. ಆಹ್ವಾನ ಪತ್ರಿಕೆಯಲ್ಲಿ ಸಂಘವು ರಾಷ್ಟ್ರಕವಿ ಕುವೆಂಪುರವರು ರಚಿಸಿರುವ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಎಂಬುದರ ಬದಲಾಗಿ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಯೇಸು ಎಂಬುದಾಗಿ ಪ್ರಕಟಿಸಿತ್ತು. ಶಾಸಕಿ ಸೌಮ್ಯ ರೆಡ್ಡಿಯವರ ಹೆಸರು, ಭಾವಚಿತ್ರ ಕೂಡ ಆಹ್ವಾನ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ಇದು ಕಳೆದೆರಡು ದಿನಗಳಿಂದ ತೀವ್ರ ವಿವಾದಕ್ಕೆ ಕಾರಣವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಶಾಸಕಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಇದಕ್ಕೀಗ ಶಾಸಕಿ ಸೌಮ್ಯ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಕಾರ್ಯಕ್ರಮಕ್ಕೆ ಬರಲು ಹೇಳಿದರೆಂದು ಹೋಗಲು ಒಪ್ಪಿಕೊಂಡಿದ್ದೆ, ನಾನು ಆಹ್ವಾನ ಪತ್ರಿಕೆ ಓದಿರಲಿಲ್ಲ. ಅದರಲ್ಲಿ ಹೃದಯ ಶಿವ ಪದ ಇರುವಲ್ಲಿ ಯೇಸು ಎಂದು ಬದಲಿಸಿದ್ದು ನನಗೆ ಗೊತ್ತಿರಲಿಲ್ಲ. ಆಮೇಲೆ ಗೊತ್ತಾದ ಮೇಲೆ ಬದಲಿಸಿ ಇಲ್ಲದಿದ್ದರೆ ನಾನು ಬರುವುದಿಲ್ಲ ಎಂದಿದ್ದೆ, ಅದರಂತೆ ಬದಲಿಸಿದರು, ಮರುದಿನಕ್ಕೆ ಕಾರ್ಯಕ್ರಮ ಮುಂದೂಡುವಂತೆ ಹೇಳಿ ಮರುದಿನ ಹೋಗಿದ್ದೆ. 

ಈ ಒಂದು ವಿಷಯ ಹಿಡಿದುಕೊಂಡು ನನಗೆ ಕೆಟ್ಟ ಹೆಸರು ತರಲು, ನನ್ನ ಹೆಸರಿಗೆ ಮಸಿ ಬಳಿಯಲು ಕೆಲವರು ಕುತಂತ್ರ ಮಾಡುತ್ತಿದ್ದಾರೆ, ಕನ್ನಡದ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಲ್ಲಿ ಬಿಜೆಪಿ ನಾಯಕರ ಪಾತ್ರ ಕೂಡ ಇರಬಹುದು. ಇಂತಹ ಸಣ್ಣತನ ಬಿಟ್ಟು, ಅನಗತ್ಯ ವಿಷಯಗಳ ಬಗ್ಗೆ ವಿವಾದವೆಬ್ಬಿಸಿ ಕಾಲಹರಣ ಮಾಡುವ ಬದಲು ಎಲ್ಲರೂ ಒಗ್ಗಟ್ಟಿನಿಂದ ಅಭಿವೃದ್ಧಿಪರ ಕೆಲಸ ಮಾಡೋಣ ಎಂದು ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಜಯನಗರ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರ ಅನುದಾನ ಕಡಿತ ಮಾಡುತ್ತಿದೆ, ಹಿಂದಿನ ಮೈತ್ರಿ ಸರ್ಕಾರದಲ್ಲಿ ಬಿಡುಗಡೆ ಮಾಡಿದಷ್ಟು ಅನುದಾನವನ್ನು ಈಗಿನ ಸರ್ಕಾರ ನೀಡುತ್ತಿಲ್ಲ, ಕೆಲಸ-ಕಾರ್ಯಗಳಿಗೆ ಸಹಕಾರ ನೀಡುತ್ತಿಲ್ಲ ಎಂದು ಸಹ ಶಾಸಕಿ ಸೌಮ್ಯ ರೆಡ್ಡಿ ಆರೋಪಿಸಿದರು. 

SCROLL FOR NEXT