ರಾಜ್ಯ

ತಮ್ಮ ಫ್ಲಾಷ್'ಬ್ಯಾಕ್ ನಿಂದ ಅನಿವಾಸಿ ಭಾರತೀಯ ಕನ್ನಡಿಗರನ್ನು ರಂಜಿಸಿದ ಸಂಸದೆ ಸುಮಲತಾ

Manjula VN

ಬೆಂಗಳೂರು: ಸಂಸದೆ ಹಾಗೂ ಕನ್ನಡದ ಖ್ಯಾತ ಅಭಿನೇತ್ರಿ ಸುಮಲತಾ ಅಂಬರೀಷ್ ಅವರು ಅನಿವಾಸಿ ಭಾರತೀಯ ಕನ್ನಡಿಗರನ್ನುದ್ದೇಶಿಸಿ ವಿಡಿಯೋ ಸಂವಾದದಲ್ಲಿ ಮಾತನಾಡಿದ್ದು, ತಮ್ಮ ಫ್ಲಾಷ್ ಬ್ಯಾಕ್'ಗಳನ್ನು ಹೇಳುವ ಮೂಲಕ ಮನರಂಜಿಸಿದ್ದಾರೆ. 

ಅನಿವಾಸಿ ಭಾರತೀಯ ಕನ್ನಡ ಸಂಘದ ಮುಖಾಂತರ ಅಂತರ್ ಜಾಲದ ಝೂಮ್ ವೇದಿಕೆಯ ಮುಖಾಂತರ ಪ್ರತಿವಾರ ಕನ್ನಡದ ಹಲವಾರು ಆನ್'ಲೈನ್ ಸಂವಾದ ಕಾರ್ಯಕ್ರಮ ಆಯೋಜಿಸಿ ನಡೆಸಿಕೊಡುತ್ತಿದ್ದರೆ, ಈ ವಾರದ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಷ್ ಭಾಗವಹಿಸಿ ಸುಮಾರು 90 ನಿಮಿಷಗಳ ಕಾಲ ಕಾರ್ಯಕ್ರಮದಲ್ಲಿ ಮಾತನಾಡಿದರು. 

25 ರಾಷ್ಟ್ರಗಳಲ್ಲಿರುವ ಅನಿವಾಸಿ ಭಾರತೀಯ ಕನ್ನಡಿಗರನ್ನುದ್ದೇಶಿ ಮಾತನಾಡಿದ ಸುಮಲತಾ ಅವರು ಕನ್ನಡ ಚಿತ್ರರಂಗದ ಅನೇಕ ನೆನೆಪುಗಳನ್ನು ಮೆಲಕು ಹಾಕಿ, ತಾವು ಚಿತ್ರರಂಗದಲ್ಲಿ ನಡೆದುಬಂದ ದಾರಿ, ಹೋರಾಟ ಹಾಗೂ ಅಂಬರೀಷ್ ಅವರ ಕುರಿತು ಮಾತನಾಡಿದರು. 

ರಾಜಕೀಯ ಕ್ಷೇತ್ರದಲ್ಲಿ ತಾವು ಎದುರಿಸಿದ ಸಮಸ್ಯೆಗಳು, ಸಂಕಷ್ಟಗಳನ್ನು ಹೇಳಿಕೊಂಡರು. ಈ ಸಂದರ್ಭದಲ್ಲಿ ಕರ್ನಾಟಕ ಸೇರಿದಂತೆ ಹೊರನಾಡಿನ ಕನ್ನಡಿಗರು ತಮಗೆ ಸ್ಪಂದಿಸಿ ಹೆಗಲು ಕೊಟ್ಟು ಸಹಕರಿಸಿದ ರೀತಿ ನೆನೆದು ಕನ್ನಡದ ನೆಲ ಹಾಗೂ ಎಲ್ಲಾ ಕನ್ನಡಿಗರಿಗೂ ಋಣಿಯಾಗಿ ಎಂದಿಗೂ ಹೋರಾಡುತ್ತೇನೆಂದು ತಿಳಿಸಿದರು. 

ಈ ನಡುವೆ ಸಂಸತ್ತಿನಲ್ಲಿ ಕನ್ನಡದ ಪರ ಧ್ವನಿ ಎತ್ತಿ ಸಮರ್ಥವಾಗಿ ಮಾತನಾಡಿದ್ದಕ್ಕೆ ಎನ್ಆರ್ಐ ಕನ್ನಡ ಸಂಘದ ಸದಸ್ಯರು ಸುಮಲತಾ ಅವರಿಗೆ ಅಭಿನಂದಿಸಿದರು. ಬಳಿಕ ಮಾತನಾಡಿದ ಸುಮಲತಾ ಅವರು, ಕನ್ನಡ ವಿಷಯವಾಗಿ ತಮ್ಮ ಜೊತೆ ಯಾವತ್ತೂ ಇರುವುದಾಗಿ ತಿಳಿಸಿದರು. ಇದೇ ವೇಳೆ ಅಭಿಷೇಕ್ ಅಂಬರೀಷ್ ಸಾಕಷ್ಟು ಅನಿವಾಸಿ ಭಾರತೀಯ ಕನ್ನಡಿಗರು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. 

SCROLL FOR NEXT