ರಾಜ್ಯ

ಕಬ್ಬಿನ ಬಾಕಿ ಬಿಲ್ ಪಾವತಿಸುವಂತೆ ಆಗ್ರಹಿಸಿ ಸಮಾಧಿಯಲ್ಲೇ ಧರಣಿ ಕುಳಿತ ರೈತ!

Manjula VN

ಬೆಳಗಾವಿ: ಕಬ್ಬಿನ ಬಾಕಿ ಬಿಲ್ ಪಾವತಿ ಮಾಡುವಂತೆ ಆಗ್ರಹಿಸಿದ ರೈತನೊಬ್ಬ ಶವ ಸಂಸ್ಕಾರಕ್ಕೆ ಅಗೆಯಲಾಗಿದ್ದ ಸಮಾಧಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಘಟನೆಯೊಂದು ಬೆಳಗಾವಿ ಜಿಲ್ಲೆಯ ಕಿತ್ತೂರೂ ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದಿದೆ. 

ಎಂ.ಕೆ.ಹುಬ್ಬಳ್ಳಿ ಪಟ್ಟಣದ ಶಿವಾನಂದ ಬೋಗಾರ (50) ಎಂಬ ರೈತನೇ ಸಮಾಧಿಯಲ್ಲಿ ಕುಳಿತು ಧರಣಿ ನಡೆಸಿದ ರೈತನಾಗಿದ್ದಾರೆ. ಇವರು ವೃದ್ಧೆಯೊಬ್ಬಳ ಶವ ಸಂಸ್ಕಾರಕ್ಕೆ ಸ್ಮಶಾನದಲ್ಲಿ ಅಗೆಯಲಾಗಿದ್ದ ಸಮಾಧಿಯಲ್ಲಿ ಕುಳಿತು ಕಬ್ಬಿನ ಬಾಕಿ ಬಿಲ್ ಪಾವತಿಸುವಂತೆ ಆಗ್ರಹಿಸಿದ್ದಾರೆ. 

ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ 114 ಟನ್ ಕಬ್ಬು ಕಳಿಸಿದ್ದೇನೆ. ಅದಕ್ಕೆ ನನಗೆ ರೂ.85 ಸಾವಿರ ಬಾಕಿ ಬಿಲ್ ಬರಬೇಕು. ಆದರೆ, ವರ್ಷ ಕಳೆದರೂ ಹಣ ಬಂದಿಲ್ಲ. ಹಣಕ್ಕಾಗಿ ಕಾರ್ಖಾನೆಗೆ ಅಲೆದು ಸಾಕಾಗಿದೆ. ಜೀವನ ನಡೆಸುವುದೇ ಕಷ್ಟವಾಗಿದೆ. ಹಾಗಾಗಿ ಸಮಾಧಿಯಲ್ಲಿ ಕುಳಿತಿದ್ದೇನೆ. ಸಾಯುವುದೊಂದೇ ಬಾಕಿ ಇದೆ. ಕಾರ್ಖಾನೆ ಅಧ್ಯಕ್ಷಕರು, ನಿರ್ದೇಶಕರು ಇಲ್ಲಿಗೆ ಬಂದು ನನಗೆ ಮಣ್ಣಾದರು ಹಾಕಿಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಕಾರ್ಖಾನೆ ನಿರ್ದೇಶಕರಾಗಿದ್ದ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಅವರ ಹೆಸರನ್ನು ಪ್ರಸ್ತಾಪಿಸಿ ಬಿಲ್ ಕೊಡಿ ಎಂದು ಆಗ್ರಹಿಸಿದ್ದಾನೆ. 

ಅಷ್ಟೇ ಅಲ್ಲ, ಮತ್ತೊಮ್ಮೆ ಚುನಾವಣೆಯಲ್ಲಿ ಗೆದ್ದು ಬಂದು ಇದ್ದ ಕಾರ್ಖಾನೆ ಜಾಗ ಮಾರಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಲ ಹೊರೆೇಯಾಗಿದೆ. ಜೀವನ ನಿರ್ವಹಣೆ ಕಷ್ಟವಾಗಿದೆ. ನಮ್ಮ ಹಣಕ್ಕಾಗಿ ಇಷ್ಟು ಕಷ್ಟಪಡಬೇಕಿದೆ. ನಿಮ್ಮ ಸಹವಾಸವೇ ಸಾಕಾಗಿದೆ ಎಂದು ತಿಳಿಸಿದ್ದಾರೆ. 

SCROLL FOR NEXT