ರಾಜ್ಯ

ವಿದೇಶಗಳಲ್ಲೂ ಮೈಸೂರು ಸಿಲ್ಕ್ ಮಳಿಗೆ ಆರಂಭ: ಸಚಿವ ನಾರಾಯಣ ಗೌಡ

Lingaraj Badiger

ದಾವಣಗೆರೆ: ಭಾರತೀಯ ಸಂಸ್ಕೃತಿಯ ಪ್ರತೀಕವಾದ ಮೈಸೂರು ರೇಷ್ಮೆ ಸೀರೆಗೆ ಅಂತರಾಷ್ಟ್ರೀಯ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಲಂಡನ್, ಅಮೆರಿಕ, ದೆಹಲಿ ಸೇರಿದಂತೆ ವಿಶ್ವದ ಅನೇಕ ಕಡೆ ಮೈಸೂರು ರೇಷ್ಮೇ ಸೀರೆಗಳ ಮಾರಾಟ ಮಳಿಗೆ ಆರಂಭಿಸುವ ಚಿಂತನೆ ನಡೆದಿದೆ ಎಂದು ರಾಜ್ಯ ತೋಟಗಾರಿಕೆ, ರೇಷ್ಮೇ ಖಾತೆ ಸಚಿವ ಡಾ.ನಾರಾಯಣ ಗೌಡ ಹೇಳಿದ್ದಾರೆ.

ದಾವಣಗೆರೆಯಲ್ಲಿಂದು ನಡೆದ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಹೆಚ್ಚು ಹೆಚ್ಚು ಮಳಿಗೆಗಳನ್ನು ತೆರೆಯುವುದರಿಂದ ಮಹಿಳೆಯರಿಗೆ ಕೆಲಸಗಳು ಸಿಗುತ್ತವೆ. ಈ ಹಿನ್ನೆಲೆಯಲ್ಲಿ ವಿಶ್ವವ್ಯಾಪಿಯಾಗಿ ಸೀರೆಗಳನ್ನು ಪರಿಚಯಿಸಲಾಗುವುದು. ಶೀಘ್ರದಲ್ಲಿಯೇ ಬಾಂಬೆಯಲ್ಲಿ ಐದು ಮಳಿಗೆ ತೆರೆಯಲಾಗುವುದು. ಒಟ್ಟಾರೆ ಬೇಡಿಕೆ ಬಂದ ಕಡೆಗಳಲ್ಲಿ ಮಾರಾಟ ಮಳಿಗೆಗಳನ್ನು ಆರಂಭಿಸಲಾಗುವುದು. ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತದೆ ಎಂದರು.

ಮಳಿಗೆ ಬಾಡಿಗೆ ಸಮಸ್ಯೆಯಿಂದ ದಾವಣಗೆರೆ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮೈಸೂರು ಸಿಲ್ಕ್ ಮಾರಾಟ ಮಳಿಗೆಗಳು ಮುಚ್ಚಿದ್ದು, ಇವುಗಳನ್ನು ತಕ್ಷಣವೆ ಮತ್ತೆ ತೆರೆಯಲು ಆದೇಶ ನೀಡುವುದಾಗಿ ತಿಳಿಸಿದರು.

ಈ ಮೊದಲು ಮಳಿಗೆ ಬಾಡಿಗೆ ನೀಡುವವರಿಗೆ ಕಮಿಷನ್ ಮತ್ತು ಬಾಡಿಗೆ ನೀಡಲಾಗುತಿತ್ತು. ಇನ್ನು ಮುಂದೆ ಕೇವಲ ಬಾಡಿಗೆ ಆದಾರದ ಮೇಲೆ ಮಳಿಗೆಗಳನ್ನು ಪಡೆದು ಕೆಲಸಗಾರರನ್ನು ಕೂಡ ಸರಕಾರವೇ ನೇಮಿಸಲಿದೆ ಎಂದು ತಿಳಿಸಿದರು.

ಕೆಲವು ಬದಲಾವಣೆಗಳೊಂದಿಗೆ ಹಾಗೂ ಕೆಲವು ಸುಧಾರಣೆಗಳೊಂದಿಗೆ ಎಲ್ಲ ಕಡೆ ಮೈಸೂರು ರೇಷ್ಮೆ ಸೀರೆ ಮಾರಾಟ ಮಳಿಗೆ ಆರಂಭಿಸಲಾಗುವುದು ಎಂದು ಸಚಿವ ನಾರಾಯಣ ಗೌಡ ತಿಳಿಸಿದರು.

SCROLL FOR NEXT