ರಾಜ್ಯ

ಕರಾವಳಿ ಜಿಲ್ಲೆಗಳು, ಮಲೆನಾಡು ಭಾಗಗಳಲ್ಲಿ ಎಲ್ಲೊ ಅಲರ್ಟ್: ಎರಡು ದಿನ ಭಾರೀ ಮಳೆ ನಿರೀಕ್ಷೆ

Shilpa D

ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳು, ದಕ್ಷಿಣ ಒಳನಾಡಿನ ಹಲವೆಡೆ 48 ಗಂಟೆಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಮಲೆನಾಡು ಭಾಗಗಳಾದ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತಗಳಿಗೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ.

ಬಯಲು ಸೀಮೆ ಪ್ರದೇಶಗಳಾದ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್, ಮುಂಬೈ ಕರ್ನಾಟಕದ ಬೆಳಗಾವಿ ಮೈಸೂರು ಭಾಗದ ಚಾಮರಾಜನಗರ ಜಿಲ್ಲೆಗಳಲ್ಲಿಯೂ ಮುಂದಿನ ಎರಡು ದಿನ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಈ ಜಿಲ್ಲೆಗಳಲ್ಲೂ ಎಲ್ಲೊ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರಿನಲ್ಲಿ ಶನಿವಾರ ಹಗುರದಿಂದ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಿದ್ದು, ಇನ್ನೂ ಎರಡು ದಿನ ಮಳೆ ಮುಂದುವರಿಯಲಿದೆ. ಎರಡೂ ದಿನವೂ ಮೋಡ ಮುಸುಕಿದ ವಾತಾವರಣ ಇರಲಿದೆ. ಹಲವು ಕಡೆಗಳಲ್ಲಿ ಚದುರಿದಂತೆ ಮಳೆಯಾಗಲಿದ್ದು, ಕೆಲವೆಡೆ ಗುಡುಗು ಸಹಿತ ವರ್ಷಧಾರೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಶನಿವಾರ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಭಾಗದ ಹಲವೆಡೆ ಹೆಚ್ಚು ಮಳೆಯಾಗಿದೆ. ಮಾರುತಿ ಮಂದಿರಲ್ಲಿ 25.5 ಮಿ.ಮೀ. ಮಳೆಯಾಗಿದೆ. ಹಂಪಿನಗರ 22, ಚಾಮರಾಜಪೇಟೆ, ವಿವಿ ಪುರಂ ತಲಾ 21.5, ಬಸವನಗುಡಿ 20.5, ಅಗ್ರಹಾರ ದಾಸರಹಳ್ಳಿ 19, ರಾಜಮಹಲ್‌ ಗುಟ್ಟಹಳ್ಳಿ 14.5 ಮಿ.ಮೀ.ನಷ್ಟು ಮಳೆಯಾಗಿದೆ. 

ಸಂಜೆ ಮಳೆ ಸುರಿದ ಬಳಿಕ ನಾನಾ ಮೇಲುರಸ್ತೆಗಳ ಅಪ್ ರ್ಯಾಂಪ್‌/ಡೌನ್‌ ರ್ಯಾಂಪ್ ಸ್ಥಳಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಕೆಲ ಸ್ಥಳಗಳಲ್ಲಿ ಮಳೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯದೆ ರಸ್ತೆಯಲ್ಲೇ ನೀರು ನಿಂತ ದೃಶ್ಯಗಳು ಕಂಡವು. ಬಿಬಿಎಂಪಿ ಪ್ರಹರಿ ಕಾರ್ಯಪಡೆಯ ಸಿಬ್ಬಂದಿಗಳು ಸಮಸ್ಯೆಯಾದ ಸ್ಥಳಕ್ಕೆ ಧಾವಿಸಿ ನೀರು ಹೊರಹಾಕುವಲ್ಲಿ ಶ್ರಮಿಸಿದರು.

SCROLL FOR NEXT