ರಾಜ್ಯ

ಸಹಕಾರ ಸಂಘದ ಮೊದಲ ತೆಂಗು ಸಂಸ್ಕರಣಾ ಘಟಕ ಲೋಕಾರ್ಪಣೆ

Lingaraj Badiger

ಚಾಮರಾಜನಗರ: ಸಹಕಾರ ಸಂಘ ಸ್ಥಾಪಿಸಿರುವ ರಾಜ್ಯದ ಮೊದಲ ತೆಂಗು ಸಂಸ್ಕರಣಾ ಘಟಕ ಶುಕ್ರವಾರ ಚಾಮರಾಜನಗರ ತಾಲೂಕಿನ ಮುನಚನಹಳ್ಳಿಯಲ್ಲಿ ಲೋಕಾರ್ಪಣೆಗೊಂಡಿತು.

ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ವಿಧ್ಯುಕ್ತವಾಗಿ ಅತ್ಯಾಧುನಿಕ ತೆಂಗು ಸಂಸ್ಕರಣಾ ಘಟಕ ಉದ್ಘಾಟಿಸಿ ಸಂತಸ ವ್ಯಕ್ತಪಡಿಸಿದರು.

ತೆಂಗು ಸಂಸ್ಕರಣಾ ಘಟಕವನ್ನು ಚಾಮರಾಜನಗರ ತಾಲೂಕು ತೆಂಗು ಬೆಳೆಗಾರರ ಸಂಸ್ಕರಣಾ ಮತ್ತು ಮಾರಾಟ ಸಹಕಾರ ಸಂಘವು ಇದನ್ನು ಸ್ಥಾಪಿಸಿದ್ದು, ರಾಜ್ಯ ಸರ್ಕಾರವೂ ನೆರವು ನೀಡಿದೆ.

2018ರ ವರ್ಷಾರಂಭದಲ್ಲೇ ಉದ್ಘಾಟನೆಗೆ ಸಿದ್ಧವಾಗಿತ್ತು. ಪ್ರಾಯೋಗಿಕವಾಗಿ ಕಾರ್ಯವನ್ನೂ ನಿರ್ವಹಿಸಿದೆ. ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಹೆಚ್​​ಡಿ ಕುಮಾರಸ್ವಾಮಿ ಬಾರದೇ ಇದ್ದುದರಿಂದ ಉದ್ಘಾಟನೆ ಸಾಧ್ಯವಾಗಿರಲಿಲ್ಲ. ಕನಿಷ್ಠ 50 ಸಾವಿರ ತೆಂಗಿನ ಕಾಯಿಗಳನ್ನು ಸಂಸ್ಕರಿಸಿ ಪುಡಿ ಮಾಡುವ ಸಾಮರ್ಥ್ಯವನ್ನು ಈ ಅತ್ಯಾಧುನಿಕ ಘಟಕ ಹೊಂದಿದೆ.

ತೆಂಗು ಸಂಸ್ಕರಣಾ ಘಟಕ ಈಗಾಗಲೇ ಕಾರ್ಯಾರಂಭ ಮಾಡಿದ್ದು, ಉತ್ಪನ್ನಗಳನ್ನೂ ತಯಾರಿಸುತ್ತಿದ್ದಾರೆ. ಈ ಘಟಕದಲ್ಲಿ ತೆಂಗಿನಕಾಯಿ ತಿರುಳಿ ಪುಡಿಯನ್ನು ತಯಾರಿಸಿ ಪ್ಯಾಕ್‌ ಮಾಡಿ ಮಾರಾಟ ಮಾಡುವ ಯೋಜನೆಯನ್ನು ಸಂಘ ಹಾಕಿದೆ. ಸಂಘವು ಸದಸ್ಯರಿಂದ ತೆಂಗಿನಕಾಯಿಗಳನ್ನು ಖರೀದಿಸುತ್ತಿದೆ. ಗುಣಮಟ್ಟದ ತೆಂಗಿನ ಕಾಯಿಗಳಿಗೆ ಮಾತ್ರ ಆದ್ಯತೆ ನೀಡುತ್ತಿದೆ. ಬೆಳೆಗಾರರು ತಮ್ಮ ತೆಂಗಿನ ಕಾಯಿಗಳನ್ನು ನೇರ ಕಾಗೆ ಘಟಕಕ್ಕೆ ಮಾರಾಟ ಮಾಡಿ ಬೆಂಬಲ ಬೆಲೆ ಪಡೆಯಬಹುದಾಗಿದೆ .
-ಗುಳಿಪುರ ನಂದೀಶ ಎಂ

SCROLL FOR NEXT