ನವದೆಹಲಿ: ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡು ಮತ್ತು ಉಡುಪಿ ಜಿಲ್ಲೆಯ ಪಡುಬಿದ್ರೆ ಕಡಲ ತೀರಗಳು ಪ್ರತಿಷ್ಠಿತ ‘ಬ್ಲೂ ಫ್ಲ್ಯಾಗ್’ ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣೆ ಲೇಬಲ್ ಪ್ರಶಸ್ತಿಗೆ ಶಿಫಾರಸುಗೊಂಡಿವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ತಿಳಿಸಿದ್ದಾರೆ.
ರಾಜ್ಯದ ಎರಡು ಬೀಚ್ ಸೇರಿ ದೇಶದ 8 ಬೀಚ್ಗಳು ಈ ಪ್ರತಿಷ್ಠಿತ ಪ್ರಶಸ್ತಿಗೆ ಶಿಫಾರಸ್ಸುಗೊಂಡಿವೆ. ದೇಶದ ಹಲವು ಕಡಲ ಕಿನಾರೆಗಳು, ವಿಶ್ವದ ಅತಿ ಸ್ವಚ್ಛ ಬೀಚ್ಗಳ ಸಾಲಿಗೆ ಸೇರಿರುವುದು, ಅತ್ಯಂತ ಸಂತಸದ ವಿಷಯ ಎಂದು ಅವರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದ ಅಂಗವಾಗಿ ಮಾತನಾಡಿದ ಅವರು, ದೇಶದ ಎಲ್ಲಾ ಬೀಚ್ ಗಳಲ್ಲೂ ಸ್ವಚ್ಛತೆ ಕಾಪಾಡಲು ಸರ್ಕಾರ ಬದ್ಧವಾಗಿದ್ದು, ಇದರಿಂದ ಕರಾವಳಿ ಭಾಗದಲ್ಲಿ ಪರಿಸರ ರಕ್ಷಣೆಗೆ ಸಹಕಾರಿಯಾಗಲಿದೆ ಎಂದರು.
ಕರ್ನಾಟಕದ ಪಡುಬಿದ್ರಿ ಮತ್ತು ಕಾಸರಕೋಡು, ಗುಜರಾತ್ ನ ಶಿವರಾಜ್ ಪುರ್, ಡಾಮನ್ ಮತ್ತು ಡಿಯುವಿನ ಗೋಗ್ಲಾ, ಒಡಿಶಾದ ಗೋಲ್ಡನ್ ಬೀಚ್, ಅಂಡಮಾನ್ ಮತ್ತು ನಿಕೋಬಾರ್ ನ ರಾಧಾನಗರ್ ಬೀಚ್ ಗಳ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ. ಈ ಮೂಲಕ ಕರಾವಳಿ ಪ್ರದೇಶದ ಸುಸ್ಥಿರ ಅಭಿವೃದ್ಧಿಗೆ ಗಮನ ಹರಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.