ರಾಜ್ಯ

ರಾಜ್ಯದಲ್ಲಿ ಕೊರೋನಾ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ: ಪ್ರಧಾನಿ ಮೋದಿಗೆ ಸಿಎಂ ಯಡಿಯೂರಪ್ಪ ಮಾಹಿತಿ

Manjula VN

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸಾವಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಜುಲೈ ತಿಂಗಳಿನಲ್ಲಿ ಶೇ.2.6ರಷ್ಟಿದ್ದ ಸಾವಿನ ಪ್ರಮಾಣ ಇದೀಗ ಶೇ.1.54ಕ್ಕೆ ಇಳಿದಿದೆ ಎಂದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ರಾಜ್ಯ ಕೊರೋನಾ ಪರಿಸ್ಥಿತಿ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಮಾಹಿತಿ ನೀಡಿದ್ದಾರೆ. 

ನಿನ್ನೆಯಷ್ಟೇ ಕೋವಿಡ್ 19 ನಿಯಂತ್ರಣ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ನವದೆಹಲಿ, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಒಟ್ಟು ಏಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು. 

ಈ ವೇಳೆ ಪ್ರಧಾನಿ ಮೋದಿಯವರಿಗೆ ಮಾಹಿತಿ ನೀಡಿದ ಯಡಿಯೂರಪ್ಪ ಅವರು, ರಾಜ್ಯದಲ್ಲಿ 136 ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಿದ್ದು, ಪ್ರತೀನಿತ್ಯ ಸುಮಾರು 70,000 ಸ್ಯಾಂಪಲ್ಸ್ ಗಳ ಪರೀಕ್ಷೆ ನಡೆಸಲಾಗುತ್ತಿದೆ. ಈವರೆಗೂ ರಾಜ್ಯದಲ್ಲಿ ಸುಮಾರು 43 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ. ವೈದ್ಯಕೀಯ ವರದಿ ಬರುತ್ತಿದ್ದಂತೆಯೇ ರೋಗಲಕ್ಷಣ ಇರುವ ಸೋಂಕಿತರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತದೆ ಮತ್ತು ಸಂಪರ್ಕ ಹೊಂದಿರುವವರನ್ನು 24 ರಿಂದ 48 ಗಂಟೆಗಳಲ್ಲಿ ಗುರುತಿಸಿ ಮತ್ತು ಅವರನ್ನು ಸಂಪರ್ಕಿಸುವ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. 

ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕದೊಂದಿಗೆ ಇರುವ ಹಾಸಿಗೆಗಳ ಸಂಖ್ಯೆಯನ್ನು 7,000 ದಿಂದ 18,000 ಕ್ಕೆ ಹೆಚ್ಚಿಸಲಾಗಿದ್ದು, ಇದನ್ನು ಮತ್ತಷ್ಟು 31,000 ಕ್ಕೆ ಹೆಚ್ಚಿಸಲಾಗುವುದು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 3,000ಕ್ಕೂ ಹೆಚ್ಚು ಐಸಿಯು ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಕಾಯ್ದಿರಿಸಲಾಗಿದೆ. 

ಪ್ರಮಾಣಿತ ಚಿಕಿತ್ಸೆಯ ಹೊರತಾಗಿ, “ರೋಗಿಗಳಿಗೆ ರೆಮ್‌ಡೆಸಿವಿರ್ ಸೇರಿದಂತೆ‘ ಇತರೆ ಔಷಧಿಗಳನ್ನು ’ಉಚಿತವಾಗಿ ನೀಡಲಾಗುತ್ತಿದೆ. ರಾಜ್ಯದಲ್ಲಿ 2,000 ಆಂಬುಲೆನ್ಸ್‌ಗಳೂ ಕೂಡ ಲಭ್ಯವಿದೆ ಎಂದು ತಿಳಿಸಿದ್ದಾರೆ. 

SCROLL FOR NEXT