ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಇಲಾಖೆಯ ನಾಲ್ಕು ನಿಗಮದ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಯಾಣಕ್ಕೆ ಬಸ್ಸನ್ನೇ ನಂಬಿಕೊಂಡಿರುವ ಜನಸಾಮಾನ್ಯರ ಮೇಲೆ ಮುಷ್ಕರದ ಬಿಸಿ ತೀವ್ರವಾಗಿ ತಟ್ಟಿದೆ.
ಇಂದು ಕೂಡ ಸಾರಿಗೆ ಇಲಾಖೆ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಬಿಗಿಪಟ್ಟು ಹಿಡಿದು ಕುಳಿತಿದ್ದಾರೆ. ಈ ಮಧ್ಯೆ ಸಾರಿಗೆ ಇಲಾಖೆ ಅಧಿಕಾರಿಗಳು ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ನೊಟೀಸ್ ನೀಡಿದ್ದು, ಸಿಬ್ಬಂದಿ ಅದಕ್ಕೆ ಕ್ಯಾರೇ ಅಂದಿಲ್ಲ ಎಂದು ತಿಳಿದುಬಂದಿದೆ.
ಅನಿವಾರ್ಯವಾಗಿ ಪ್ರಯಾಣಿಸಬೇಕಾದ ಜನರು ದುಪ್ಪಟ್ಟು ಹಣ ಕೊಟ್ಟು, ಬೆಂಗಳೂರಿನಂತಹ ಸಿಟಿಗಳಲ್ಲಿ ಆಟೋ ಚಾಲಕರು ಕೇಳಿದ ದರವನ್ನು ನೀಡಿ ಪ್ರಯಾಣಿಸಬೇಕಾದ ಪರಿಸ್ಥಿತಿ.
ಸಾಲು, ಸಾಲು ರಜೆ, ಪ್ರಯಾಣಿಕರಿಗೆ ಸಂಕಷ್ಟ, ಖಾಸಗಿ ಬಸ್ಸುಗಳಿಗೆ ಹಬ್ಬ: ನಾಳೆ ವಾರಾಂತ್ಯ, ನಾಡಿದ್ದು ಸೋಮವಾರ ಒಂದು ದಿನ ರಜೆ ಹಾಕಿದರೆ, ಮಂಗಳವಾರ ಯುಗಾದಿ ಹಬ್ಬ ಇರುವುದರಿಂದ ನಾಲ್ಕು ದಿನ ರಜೆಯೆಂದು ಊರಿಗೆ ಹೋಗಬೇಕೆಂದವರು ಖಾಸಗಿ ಬಸ್ಸನ್ನೇ ನಂಬಿಕೊಳ್ಳಬೇಕಾಗಿದೆ, ಇಲ್ಲವೇ ರೈಲುಗಳಲ್ಲಿ ಊರಿಗೆ ಹೋಗುವವರು ಹೆಚ್ಚಾಗಿರುವುದರಿಂದ ರೈಲುಗಳಲ್ಲಿ ದಟ್ಟಣೆ ತೀವ್ರವಾಗಿರಬಹುದು.
ಬಸ್ ಮುಷ್ಕರ ಹಿನ್ನೆಲೆಯಲ್ಲಿ ಖಾಸಗಿ ಬಸ್ಸುಗಳು ಕೇಳಿದಷ್ಟು ಹಣ ನೀಡಿ ಊರಿಗೆ ಹೋಗಬೇಕಾದ ಅನಿವಾರ್ಯ ಪ್ರಯಾಣಿಕರದ್ದು. ಬಸ್ ಮುಷ್ಕರ ಹಿನ್ನೆಲೆ ಕಳೆದ ಎರಡು ದಿನಗಳಿಂದ ಉತ್ತರ ಕರ್ನಾಟಕ ಭಾಗಕ್ಕೆ ಖಾಸಗಿ ಬಸ್ ಗಳು ಅಷ್ಟೊಂದು ಕಂಡುಬಂದಿಲ್ಲ. ಹುಬ್ಬಳ್ಳಿ, ರಾಯಚೂರು, ಕಲಬುರ್ಗಿ, ಬೀದರ್, ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿದಂತೆ ಇತರೆ ಭಾಗಕ್ಕೆ ಬಸ್ ಸಮಸ್ಯೆ ಇದ್ದು, ಹಬ್ಬದ ಕಾರಣ ಊರಿಗೆ ಹೋಗುವ ಜನರಿಗೆ ಸಮಸ್ಯೆ ಕಾಡಲಿದೆ.