ರಾಜ್ಯ

ಮಾಜಿ ಸಚಿವ ವಿನಯ ಕುಲಕರ್ಣಿ ಸೋದರನ ಕಾರು ಅಪಘಾತ: ಇಬ್ಬರು ಸಾವು

Shilpa D

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಸೋದರ ವಿಜಯ ಕುಲಕರ್ಣಿ ಚಲಿಸುತ್ತಿದ್ದ ಕಾರು ಸೋಮವಾರ ಮೂರು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ನಗರದ ಹೊಸ ಬಸ್ಸು ನಿಲ್ದಾಣದ ಬಳಿ ಸಂಭವಿಸಿದೆ.

ಮೃತರನ್ನು ದೇವರಹುಬ್ಬಳ್ಳಿ ಮೂಲದ ಚರಣ ನಾಯಕ್ (17) ಹಾಗೂ ಶೇಖರ ಹುದ್ದಾರ (40) ಎಂದು ಗುರುತಿಸಲಾಗಿದೆ. ಬೆಳಗಾವಿಯಿಂದ ಬರುತ್ತಿದ್ದ ಕಾರು ಕುಮಾರೇಶ್ವರ ನಗರದ ಕೆವಿಜಿ ಬ್ಯಾಂಕ್‌ ಬಳಿ ರಸ್ತೆ ಪಕ್ಕದಲ್ಲಿ ನಿಂತಿದ್ದ ದ್ವಿಚಕ್ರವಾಹನಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಹೊಡೆತಕ್ಕೆ ಇಬ್ಬರೂ ಮೃತಪಟ್ಟಿದ್ದು, ಇನ್ನಿಬ್ಬರೂ ತೀವ್ರವಾಗಿ ಗಾಯಗೊಂಡಿದ್ದಾರೆ .

ಬೆಳಗಾವಿಯಿಂದ ನಗರಕ್ಕೆ ಬರುತ್ತಿದ್ದ ಈ ಕಾರು (ಕೆಎ–25–ಪಿ–007) ವಿಜಯ ಕುಲಕರ್ಣಿ ಅವರಿಗೆ ಸೇರಿದ್ದು ಎನ್ನಲಾಗಿದೆ. ಈ ಸಂದರ್ಭದಲ್ಲಿ ಚಾಲಕ ಕಾರು ಚಲಾಯಿಸುತ್ತಿದ್ದರು. ವಿಜಯ ಕುಲಕರ್ಣಿ ಪಕ್ಕದ ಆಸನದಲ್ಲಿದ್ದರು ಎನ್ನಲಾಗಿದೆ.

ಅಪಘಾತ ನಡೆದ ಸಂದರ್ಭದಲ್ಲಿ ಕಾರಿನಿಂದ ಕೆಳಗಿಳಿದ ವಿಜಯ, ಕೆಲ ಹೊತ್ತು ನಿಂತು ಅಲ್ಲಿಂದ ತೆರಳಿದರು ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ‌. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಘಟನೆಗೆ ಸಂಬಂಧಿಸಿದಂತೆ ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT