ಬೆಂಗಳೂರು: ಸ್ಯಾಂಪಲ್ ಸಂಗ್ರಹಿಸಿದ 24 ಗಂಟೆಗಳಲ್ಲಿ ಕೋವಿಡ್ ಆರ್ಟಿ-ಪಿಸಿಆರ್ ವರದಿ ನೀಡಬೇಕೆಂದು ರಾಜ್ಯದ ಎಳ್ಲಾ ಲ್ಯಾಬ್ ಗಳು ಹಾಗೂ ಪರೀಕ್ಷಾ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಬುಧವಾರ ಸೂಚನೆ ನೀಡಿದೆ.
ಕೆಲ ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಕೊವಿಡ್ ಆರ್ಟಿ-ಪಿಸಿಆರ್ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಿದ ಬಳಿಕ ಪರೀಕ್ಷಾ ಫಲಿತಾಂಶವನ್ನು ಅತಿ ಶೀಘ್ರದಲ್ಲಿ ಪ್ರಕಟಿಸಬೇಕು. ಪರೀಕ್ಷೆಯ ವರದಿಯನ್ನು 24 ಗಂಟೆಯೊಳಗೆ ನೀಡುವಂತೆ ಸೂಚನೆ ನೀಡಿತ್ತು. ಅಲ್ಲದೇ, ಪರೀಕ್ಷಾ ಮಾಹಿತಿಯನ್ನು 24 ಗಂಟೆಗಳ ಅವಧಿಯೊಳಗಾಗಿ ICMR ಪೋರ್ಟಲ್ನಲ್ಲಿ ನಮೂದಿಸಬೇಕು ಎಂದು ಆದೇಶಿಸಿತ್ತು.
ಪರೀಕ್ಷಾ ವರದಿಗಳನ್ನು ತಡವಾಗಿ ನೀಡಲಾಗುತ್ತಿದೆ ಎಂದು ಸಾಕಷ್ಟು ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್ ಈ ನಿರ್ದೇಶನ ನೀಡಿತ್ತು ಎಂದು ಮೂಲಗಳು ತಿಳಿಸಿವೆ.
ಹೈಕೋರ್ಟ್ ಆದೇಶದ ಬೆನ್ನಲ್ಲೇ ಇದೀಗ ಸರ್ಕಾರದ ಮುಖ್ಯ ಕಾರ್ಯದರ್ಶಿ ಜಾವೈದ್ ಅಖ್ತರ್ ಅವರು ಎಲ್ಲಾ ಪ್ರಯೋಗಾಲಯಗಳು ಹಾಗೂ ಪರೀಕ್ಷಾ ಸಂಸ್ಥೆಗಳಿಗೆ ಸ್ಯಾಂಪಲ್ ಸಂಗ್ರಹಿಸಿದ 24 ಗಂಟೆಗಳಲ್ಲಿ ಕೋವಿಡ್ ಆರ್ಟಿ-ಪಿಸಿಆರ್ ವರದಿ ನೀಡಬೇಕೆಂದು ಸೂಚಿಸಿದ್ದಾರೆ.