ರಾಜ್ಯ

ಕೊರೋನಾ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕರ್ನಾಟಕಕ್ಕೆ ದೇಶದಲ್ಲಿ ಮೂರನೇ ಸ್ಥಾನ: ಮಹಾರಾಷ್ಟ್ರ, ದೆಹಲಿ ಮುಂಚೂಣಿಯಲ್ಲಿ!

Sumana Upadhyaya

ಬೆಂಗಳೂರು: ಕೊರೋನಾ ಎರಡನೇ ಅಲೆಯ ತೀವ್ರ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿಯೂ ಹೆಚ್ಚಾಗಿದೆ. ಪ್ರತಿದಿನ ಕೊರೋನಾದಿಂದ ಸಾಯುವವರ ಸಂಖ್ಯೆ ಕೂಡ ವಿಪರೀತವಾಗಿದೆ. ನಿನ್ನೆಯ ಲೆಕ್ಕ ತೆಗೆದುಕೊಂಡರೆ ಮಹಾರಾಷ್ಟ್ರ ಮತ್ತು ದೆಹಲಿ ನಂತರ ಕೊರೋನಾದಿಂದ ಮೃತಪಟ್ಟವರಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

ರಾಜ್ಯದಲ್ಲಿ ಇದುವರೆಗೆ 14 ಸಾವಿರದ 807 ಮಂದಿ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಇದುವರೆಗೆ 15 ಸಾವಿರದ 009 ಮಂದಿ ಮೃತಪಟ್ಟರೆ, ಮಹಾರಾಷ್ಟ್ರದಲ್ಲಿ ಇಲ್ಲಿಯವರೆಗೆ 66 ಸಾವಿರದ 179 ಮಂದಿ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಏಪ್ರಿಲ್ 1ರಿಂದ ಏಪ್ರಿಲ್ 25ರವರೆಗೆ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 2 ಸಾವಿರದ 036 ಆಗಿದೆ. ಏಪ್ರಿಲ್ 23ರಂದು ಅತಿಹೆಚ್ಚು 208 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.

ಇಷ್ಟು ಕಡಿಮೆ ದಿನದೊಳಗೆ ಕೊರೋನಾದಿಂದ ಹೆಚ್ಚು ಮಂದಿ ಮೃತಪಡಲು ಕಾರಣ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ, ಆಕ್ಸಿಜನ್ ಪೂರೈಕೆ ಸರಿಯಾಗಿ ಸಿಗದಿದ್ದುದು, ರೆಮೆಡಿಸಿವಿರ್, ಟೊಲಿಸಿಝಮ್ಯಾಬ್ ಗಳಂತಹ ಔಷಧಿಗಳು ಕೊರೋನಾ ರೋಗಿಗಳಿಗೆ ನೀಡಲು ಸರಿಯಾಗಿ ಸಿಗದಿದ್ದುದು ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನೇಕ ರೋಗಿಗಳು ಹೋಂ ಐಸೊಲೇಷನ್ ಗೆ ಒಳಗಾಗಿದ್ದು ಆಸ್ಪತ್ರೆಗೆ ತಡವಾಗಿ ತಲುಪುವುದರಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದಿರುವುದು ಸಹ ಮತ್ತೊಂದು ಕಾರಣವಾಗಿದೆ.  ಪಾಸಿಟಿವ್ ಕೇಸುಗಳು ಹೆಚ್ಚಾಗುತ್ತಿದ್ದಂತೆ ಸಾಯುವವರ ಸಂಖ್ಯೆ ಕೂಡ ಅಧಿಕವಾಗಿದೆ. ಸಾವಿನ ಸಂಖ್ಯೆ ಕಡಿಮೆ ಮಾಡಲು ಟೆಸ್ಟಿಂಗ್, ಪತ್ತೆ ಹಚ್ಚುವಿಕೆ ಆದಷ್ಟು ಶೀಘ್ರವಾಗಿ ಮಾಡಬೇಕೆಂದು ತಜ್ಞರು ಹೇಳುತ್ತಾರೆ.

ಮಣಿಪಾಲ್ ಆಸ್ಪತ್ರೆಯ ಡಾ ಅನೂಪ್ ಅಮರ್ ನಾಥ್, ತಡವಾಗಿ ವೈದ್ಯರ ಬಳಿ ತೋರಿಸುವುದು ಮತ್ತು ತೃತೀಯ ಕೇಂದ್ರಗಳಿಗೆ ತಡವಾಗಿ ಉಲ್ಲೇಖಿಸುವುದು ಹೆಚ್ಚಿನ ಸಂಖ್ಯೆಯ ಸಾವುಗಳಿಗೆ ಮುಖ್ಯ ಕಾರಣಗಳಾಗಿವೆ. ಸಾಂಕ್ರಾಮಿಕ ರೋಗದ ಗುಣಲಕ್ಷಣಗಳೆಂದರೆ, ಪ್ರಕರಣಗಳ ಏರಿಕೆಯೊಂದಿಗೆ, ಕೊರೋನಾ ಪಾಸಿಟಿವ್ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ಆ ಮೂಲಕ ಮರಣ ಪ್ರಮಾಣವೂ ಹೆಚ್ಚುತ್ತದೆ ಎಂದು ಹೇಳುತ್ತಾರೆ.

ಕೊರೋನಾ ಸೋಂಕಿಗೆ ತುತ್ತಾದವರಲ್ಲಿ ಯಾರು ಹೋಂ ಐಸೊಲೇಷನ್ ನಲ್ಲಿರಬೇಕು, ಯಾರು ಆಸ್ಪತ್ರೆಗೆ ದಾಖಲಾಗಬೇಕೆಂದು ಆರಂಭದಲ್ಲಿಯೇ ರೋಗಿಗಳಿಗೆ ಹೇಳಬೇಕು. ಇದನ್ನು ಸರಿಯಾಗಿ ಮಾಡಿದರೆ ಹಲವು ರೋಗಿಗಳನ್ನು ಕಾಪಾಡಬಹುದು ಎನ್ನುತ್ತಾರೆ ಡಾ ಅಮರನಾಥ್.

SCROLL FOR NEXT