ರಾಜ್ಯ

ಸಿನಿಮಾ ಚಿತ್ರೀಕರಣಕ್ಕೆ ಸಂಬಂಧಪಟ್ಟಂತೆ ನಾಳೆ-ನಾಡಿದ್ದರಲ್ಲಿ ಕೆಲವು ಆದೇಶ ಹೊರಡಿಸುತ್ತೇವೆ: ಸಿಎಂ ಬಸವರಾಜ ಬೊಮ್ಮಾಯಿ

Sumana Upadhyaya

ಬೆಂಗಳೂರು: ಸಿನಿಮಾ ಚಿತ್ರೀಕರಣ ವೇಳೆ ನಿಯಮಗಳನ್ನು ಗಾಳಿಗೆ ತೂರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿನಿಮಾ ಚಿತ್ರೀಕರಣ ವೇಳೆ ಇಂತಹ ಹಲವು ಅವಘಡಗಳು ನಡೆಯುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಚಿತ್ರೀಕರಣಕ್ಕೆ ನೀತಿ-ನಿಯಮಗಳಿದ್ದರೂ ಕೆಲವರು ಅನುಸರಿಸುವುತ್ತಿಲ್ಲ, ಇದರಿಂದ ಅವಘಡಗಳು ಸಂಭವಿಸುತ್ತವೆ. ನಿಯಮಗಳನ್ನು ಇನ್ನಷ್ಟು ಸ್ಪಷ್ಟೀಕರಣದ ಜೊತೆಗೆ ಸಾಹಸ ಚಿತ್ರೀಕರಣಕ್ಕೆ ಸರ್ಕಾರದಿಂದ ಅನುಮತಿಯನ್ನು ಪಡೆಯಬೇಕು ಅದರ ಜೊತೆ ಅನುಮತಿಯಿಲ್ಲದೆ ಚಿತ್ರೀಕರಣ ಮಾಡುವಂತಿಲ್ಲ ಎಂಬ ಕಠಿಣ ನಿಯಮವನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.

ಸಿನಿಮಾ ಚಿತ್ರೀಕರಣಕ್ಕೆ ಸಂಬಂಧಪಟ್ಟಂತೆ ಕೆಲವು ಆದೇಶಗಳನ್ನು ನಾಳೆ-ನಾಡಿದ್ದಿನೊಳಗೆ ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ.  

ರಾಮನಗರದ ಖಾಸಗಿ ರೆಸಾರ್ಟ್ ವೊಂದರಲ್ಲಿ ಲವ್ ಯೂ ರಚ್ಚು ಸಿನಿಮಾದ ಚಿತ್ರೀಕರಣ ವೇಳೆ ನಿನ್ನೆ ಸಾಹಸ ಕಲಾವಿದ ವಿವೇಕ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿ ಸಿಎಂ ಬೊಮ್ಮಾಯಿ ಹೀಗೆ ಹೇಳಿದ್ದಾರೆ.

2016ರಲ್ಲಿ ದುನಿಯಾ ವಿಜಯ್ ನಾಯಕ ನಟನಾಗಿ ಅಭಿನಯಿಸಿದ್ದ ಮಾಸ್ತಿಗುಡಿ ಚಿತ್ರದ ಚಿತ್ರೀಕರಣ ವೇಳೆ ಸಾಹಸ ಕಲಾವಿದರಾದ ಉದಯ್ ಮತ್ತು ಅನಿಲ್ ನೀರಿಗೆ ಜಿಗಿದು ಮೇಲೆ ಬರಲು ಸಾಧ್ಯವಾಗದೆ ಅಸುನೀಗಿದ್ದರು. 

SCROLL FOR NEXT