ರಾಜ್ಯ

ಮೈಸೂರು: ಮುಮ್ಮಡಿ ಕೃಷ್ಣರಾಜ ಒಡೆಯರ್ ದೇವಾಲಯದಲ್ಲಿನ ವಿಗ್ರಹ, ವ್ಯವಸ್ಥೆ ಅಸ್ತವ್ಯಸ್ತ! 

Srinivas Rao BV

ಮೈಸೂರು: ಮೈಸೂರು ಒಡೆಯರ ಇತಿಹಾಸದಲ್ಲಿ ಹಲವು ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸಿದ ಅರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಭಕ್ತಿ ವಿಗ್ರಹಗಳು ಇರುವ ದೇವಾಲಯ ಇಂದು ಅವ್ಯವಸ್ಥೆಯ ಆಗರವಾಗಿದೆ. 

ಪ್ರಸನ್ನ ಕೃಷ್ಣಸ್ವಾಮಿ ದೇವಾಲಯದಲ್ಲಿರುವ ಮುಮ್ಮಡಿ ಕೃಷ್ಣರಾಜ ಒಡೆಯರ್ ಹಾಗೂ ಅವರ ಪತ್ನಿಯರ ವಿಗ್ರಹಗಳ ಭಕ್ತ ವಿಗ್ರಹಗಳ ಬಗ್ಗೆ ಸೂಕ್ತ ನಿಗಾ ವಹಿಸದೇ ಹಾಳುಬಿದ್ದಿವೆ. 

ಮುಜರಾಯಿ ಇಲಾಖೆಯ ನಿರ್ಲಕ್ಷ್ಯವೋ ಅಥವಾ ದೇವಾಲಯದ ಅರ್ಚಕರ ನಿರ್ಲಕ್ಷ್ಯವೋ ಒಟ್ಟಿನಲ್ಲಿ ದೇವಾಲಯದ ಒಳಭಾಗದಲ್ಲಿ ಇರುವ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ನಾಲ್ವರು ಪತ್ನಿಯರು-ಚೆಲುವಾಜಮ್ಮಣ್ಣಿ, ದೇವಾಜಮ್ಮಣ್ಣಿ, ಕೃಷ್ಣಾಜಮ್ಮಣ್ಣಿ ಹಾಗೂ ಮುದ್ದ ಕೃಷ್ಣಾಜಮ್ಮಣ್ಣಿ ಒಟ್ಟಿಗೆ ನಿಂತಿರುವ ಸಣ್ಣ ತಾಮ್ರದ ವಿಗ್ರಹಗಳು ಶಿಥಿಲಾವಸ್ಥೆ ತಲುಪಿದೆ. 

ಈ ವಿಗ್ರಹಳ ಬಳಿ ಕೆಟ್ಟುನಿಂತಿರುವ ಫ್ಯಾನ್, ಕಬ್ಬಿಣದ ರಾಡ್ ಸೇರಿದಂತೆ ಇನ್ನಿತರ ತ್ಯಾಜ್ಯ ಯೋಗ್ಯ ವಸ್ತುಗಳನ್ನು ಇಡಲಾಗಿದ್ದು ಇಡೀ ಪ್ರದೇಶ ದಾಸ್ತಾನು ಕೊಠಡಿಯ ಮಾದರಿಯಲ್ಲಿ ತಯಾರಾಗಿದೆ. 
  
ವಿದೇಶಿಗರೂ ಭೇಟಿ ನೀಡುವ, ವಾರ್ಷಿಕ 35 ಲಕ್ಷ ಮಂದಿ ಬರುವ ಐತಿಹಾಸಿಕ ಹಿನ್ನೆಲೆಯುಳ್ಳ ಈ ದೇವಾಲಯದಲ್ಲಿ ಈ ರೀತಿಯ ಪರಿಸ್ಥಿತಿ ಉಂಟಾಗಿರುವುದು ತಲೆ ತಗ್ಗಿಸುವ ವಿಷಯವಾಗಿದೆ. 
 
ರಾಹುಲ್ ಮೂರ್ತಿ ಎಂಬ ವಿದ್ಯಾರ್ಥಿ ಇತ್ತೀಚೆಗೆ ಈ ದೇವಾಲಯಕ್ಕೆ ಭೇಟಿ ನೀಡಿದ್ದು, ಐತಿಹಾಸಿಕ ದೇವಾಲಯ ಸ್ಟೋರ್ ರೂಮ್ ರೀತಿಯಾಗಿರುವುದನ್ನು ಕಂಡು ತೀವ್ರ ಅಸಮಾಧಾನಕ್ಕೆ ಒಳಗಾಗಿದ್ದರು. 

"ನಾನು ಈ ದೇವಾಲಯಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದೆ. ಕಳೆದ ಬಾರಿ ತೆರಳಿದಾಗಲೂ ಭಕ್ತ ವಿಗ್ರಹಗಳ ನಿರ್ವಹಣೆ ಕೆಟ್ಟ ಪರಿಸ್ಥಿಯಲ್ಲೇನೂ ಇರಲಿಲ್ಲ. ಆದರೆ ಈ ಬಾರಿ ಭೇಟಿ ನೀಡಿದಾಗ ಸ್ಟೋರ್ ರೂಮ್ ರೀತಿಯಾಗಿರುವುದು ಕಂಡು ಅಘಾತಕ್ಕೊಳಗಾದೆ. ಅಧಿಕಾರಿಗಳು ಇತ್ತ ಗಮನ ಹರಿಸಿ ದೇವಾಲಯದ ಗತವೈಭವ ಮರುಕಳಿಸುವಂತೆ ಮಾಡಬೇಕು, ಎಲ್ಲಾ ವಿಗ್ರಹಳನ್ನೂ ಸುಸ್ಥಿತಿಯಲ್ಲಿಡುವಂತಾಗಬೇಕು" ಎಂದು ಮನವಿ ಮಾಡಿದ್ದಾರೆ. 

ದೇವಾಲಯಕ್ಕೆ ಹಲವು ಅನುದಾನಗಳನ್ನು ರಾಜಮನೆತನ ನೀಡಿದ್ದರುಂದ ಅದರ ಪ್ರತೀಕವಾಗಿ ವಿಗ್ರಹಗಳನ್ನು ದೇವಾಲಯದ ಭಾಗದಲ್ಲಿ ಇರಿಸಲಾಗಿದೆ. 15 ತಿಂಗಳ ಬಳಿಕ ಸಾಂಕ್ರಾಮಿಕದಿಂದ ಚೇತರಿಸಿಕೊಂಡು ಪ್ರವಾಸೋದ್ಯಮಕ್ಕೆ ಮರಳಿ ಜೀವ ನೀಡುವ ಸಮಯದಲ್ಲಿ ಅಧಿಕಾರಿಗಳು ಈ ರೀತಿಯ ಎಡವಟ್ಟು ಮಾಡಿದ್ದಾರೆ. 

ಈ ವಿಷಯವನ್ನು ಮುಜರಾಯಿ ತಹಶೀಲ್ದಾರ್ ಎಸ್ಎನ್ ಯತಿರಾಜು ಅವರ ಗಮನಕ್ಕೆ ತರಲಾಗಿದ್ದು, ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

SCROLL FOR NEXT