ರಾಜ್ಯ

ನೂತನ ಸಿಎಂ ಬೊಮ್ಮಾಯಿ ಡೈನಾಮಿಕ್: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

Nagaraja AB

ಬೆಂಗಳೂರು: ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಡೈನಾಮಿಕ್ ಎಂದಿದ್ದಾರೆ. ನಿರ್ಲಕ್ಷ್ಯ ದಿಂದ ಕೆರೆಗಳು ಒತ್ತುವರಿಯಾಗಿ ಮರೆಯಾಗಿವೆ, ಹೊಸ ಮುಖ್ಯಮಂತ್ರಿ ಡೈನಾಮಿಕ್ ಆಗಿದ್ದು, ಅವರು ಕೆರೆಗಳ ಸಂರಕ್ಷಣೆಗೆ ಸಕಾಲದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆಂದು ವೆಂಕಯ್ಯ ನಾಯ್ಡು ಭರವಸೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಜಕ್ಕೂರು ಆವರಣದಲ್ಲಿರುವ ಜವಾಹರ್ ಲಾಲ್ ನೆಹರು ಸೆಂಟರ್ ಅಡ್ವಾನ್ಸ್ ಸೈಂಟಿಫಿಟಿಕ್ ಸಂಶೋಧನಾ ಕೇಂದ್ರದ ನಾವೀನ್ಯತೆ ಮತ್ತು ಅಭಿವೃದ್ಧಿ ಕೇಂದ್ರದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಈ ಸಂಸ್ಥೆಯು ವಿಜ್ಞಾನ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ಕೊಟ್ಟಿದ್ದು, ಜಾಗತಿಕವಾಗಿ ತನ್ನ ಸಾಧನೆಗಳಿಂದ ಗಮನ ಸೆಳೆದಿದೆ ಎಂದರು.

ಬೆಂಗಳೂರು ಕೆರೆಗಳ ಊರು, ಆದರೆ, ಒತ್ತುವರಿಯಿಂದಾಗಿ ಹಲವು ಕೆರೆಗಳು ಮರೆಯಾಗಿವೆ. ಈಗ ಉಳಿದ ಕೆರೆಗಳನ್ನಾದರೂ ಪುನಶ್ಚೇತನ ಮಾಡುವ ಮೂಲಕ ಸಂರಕ್ಷಣೆ ಮಾಡಬೇಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಿಯಾತ್ಮಕವಾಗಿ ಒತ್ತುವರಿಯನ್ನು ತೆರವುಗೊಳಿಸಲಿದ್ದಾರೆ ಎಂದು ವೆಂಕಯ್ಯ ನಾಯ್ಡು ಹೇಳಿದರು. 

ಕನ್ನಡದಲ್ಲಿಯೇ ತಮ್ಮ ಮಾತು ಆರಂಭಿಸಿದ ವೆಂಕಯ್ಯ ನಾಯ್ಡು, ಈ ಕೇಂದ್ರದ ಭೂಮಿ ಪೂಜೆಗೆ ಬಂದಿದ್ದು ಸಂತಸ ತಂದಿದೆ. ವಿಭಿನ್ನ ವೈಜ್ಞಾನಿಕ ಸಂಶೋಧನೆಗಳ ಮೂಲಕ‌ 300 ಪೇಟೆಂಟ್ ಗಳನ್ನು ಸಂಸ್ಥೆ ತನ್ನದಾಗಿಸಿಕೊಂಡಿದೆ. ಹೊಸ ಹೊಸ ಆವಿಷ್ಕಾರಗಳ ಮೂಲಕ ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಈ ಸಂಸ್ಥೆಯು ಉತ್ತಮ ಸೇವೆ ಸಲ್ಲಿಸುತ್ತಿದೆ. ಎಲ್ಲ ವಿಜ್ಞಾನಿಗಳು ಜನರಿಗೆ ರೈತರಿಗೆ ವೈಜ್ಞಾನಿಕವಾಗಿ ತಮ್ಮ ಸಂಶೋಧನೆಗಳ ಮೂಲಕ ಸೇವೆ ಮಾಡಬೇಕಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು

ಕಾರ್ಯಕ್ರಮಕ್ಕೂ ಮುನ್ನ ಬೆಂಗಳೂರಿಗೆ ಬಂದಿಳಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು  ಸಿಎಂ ಬಸವರಾಜ ಬೊಮ್ಮಾಯಿ  ಮತ್ತಿತರರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೂಗುಚ್ಛ ನೀಡಿ ಬರಮಾಡಿಕೊಂಡರು.

SCROLL FOR NEXT