ರಾಜ್ಯ

ಬೆಂಗಳೂರಿನಲ್ಲಿ ವೃದ್ಧ ದಂಪತಿ ಕೊಲೆ ಪ್ರಕರಣ: ಅನಂತಪುರದಲ್ಲಿ ಆರೋಪಿಗಳ ಬಂಧನ

Vishwanath S

ಬೆಂಗಳೂರು: ವರಮಹಾಲಕ್ಷ್ಮಿ ವ್ರತದ ದಿನ ಬೆಂಗಳೂರು ಕುಮಾರಸ್ವಾಮಿ ಲೇಔಟ್ ನಲ್ಲಿ ದಂಪತಿಯನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಆಂಧ್ರದ ಅನಂತಪುರದಲ್ಲಿ ಬಂಧಿಸಲಾಗಿದೆ. 

ಬಂಧಿತರು ನಾರಾಯಣಸ್ವಾಮಿ, ತಿರುಮಲದೇವರಪಲ್ಲಿ ಗಂಗಾಧರ, ದೇವಾಂಗಂ ರಾಮು ಮತ್ತು ಅನಂತಪುರ ಜಿಲ್ಲೆಯ ಶೇಖ್ ಆಸಿಫ್ ಎಂದು ತಿಳಿದುಬಂದಿದೆ.

ನಾರಾಯಣಸ್ವಾಮಿ ಮೃತ ಶಾಂತರಾಜು ಮತ್ತು ಪ್ರೇಮಲತಾ ಮನೆಯನ್ನು ಬಾಡಿಗೆಗೆ ಪಡೆದಿದ್ದ. ಮಾಲೀಕರು ಮನೆಯಿಂದ ಹಣ ಮತ್ತು ಚಿನ್ನವನ್ನು ಸುಲಿಗೆ ಮಾಡಲು ಸಂಚು ರೂಪಿಸಿದ್ದು ಅದರಂತೆ ವರಮಹಾಲಕ್ಷ್ಮಿ ವ್ರತದ ದಿನ ಮಧ್ಯಾಹ್ನ ತನ್ನ ಮೂವರು ಅನುಯಾಯಿಗಳೊಂದಿಗೆ ಬಂದಿದ್ದಾನೆ. ಪ್ರೇಮಲತಾ ಬಾಗಿಲು ತೆರೆದು ಮನೆಗೆ ಕರೆದು ಕುಡಿಯಲು ನೀರು ಮತ್ತು ಚಹಾ ನೀಡಿದ್ದಾರೆ.

ದಂಪತಿಯೊಂದಿಗೆ ಸ್ವಲ್ಪ ಹೊತ್ತು ಮಾತನಾಡಿದ ನಂತರ ದೇವಾಂಗಂ ರಾಮು ಪ್ರೇಮಲತಾಳನ್ನು ಶೌಚಾಲಯಕ್ಕೆ ಹೋಗಬೇಕು ಎಲ್ಲಿದೆ ಎಂದು ಕೇಳಿದ್ದಾನೆ. ಬಾತ್ ರೂಂ ತೋರಿಸಲು ಬಂದ ಪ್ರೇಮಲತಾರನ್ನು ಬೈಕ್ ಕ್ಲಚ್ ವೈರ್ ನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಇದರ ನಡುವೆ ಮನೆಯ ಹಾಲ್ ನಲ್ಲಿ  ನಾರಾಯಣಸ್ವಾಮಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಕಾಂತರಾಜು ಅವರನ್ನು ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿ ನಂತರ ಬೀರುವಿನಲ್ಲಿದ್ದ 193 ಗ್ರಾಂ ಚಿನ್ನದ ಆಭರಣ ಮತ್ತು 2,000 ರೂ. ನಗದನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.  

ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಅನಂತಪುರಕ್ಕೆ ತೆರಳಿದ್ದರು. ಪೊಲೀಸರು ನೂರಾರು ಸಿಸಿಟಿವಿ ದೃಶ್ಯಾವಳಿಗಳನ್ನು ಮತ್ತು ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನಡೆಸಿದರು. ಕೆಲ ಮಾಹಿತಿಗಳ ಆಧಾರದ ಮೇಲೆ ಅನಂತಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

SCROLL FOR NEXT