ರಾಜ್ಯ

ಎನ್ ಇಪಿಯಿಂದ ವಿದ್ಯಾರ್ಥಿಗಳಲ್ಲಿ ಜ್ಞಾನದ ಜೊತೆಗೆ ಕೌಶಲ್ಯ ಅಭಿವೃದ್ಧಿ, ಪರಿಪೂರ್ಣ ವ್ಯಕ್ತಿಗಳನ್ನಾಗಿ ರೂಪಿಸುವ ಆಶಯ: ಡಾ. ಸಿ.ಎನ್. ಅಶ್ವಥ ನಾರಾಯಣ

Sumana Upadhyaya

ಬೆಂಗಳೂರು: ಕರ್ನಾಟಕದಲ್ಲಿ ಪ್ರಸಕ್ತ ವರ್ಷದಿಂದಲೇ ಜಾರಿಗೆ ಬರುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾಹಿತಿ ಹಂಚಿಕೊಂಡರು. 

ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ, ಸಮಗ್ರ ಪ್ರಗತಿಗೆ ಎನ್ ಇಪಿ-2020 ಪ್ರಮುಖ ಪಾತ್ರ ವಹಿಸಲಿದೆ. ನಿಖರ ಮಾಹಿತಿ ಪ್ರಸಾರ, ರಾಷ್ಟ್ರೀಯ ಶಿಕ್ಷಣ ನೀತಿಯ ಸಮರ್ಪಕ ಅನುಷ್ಠಾನಕ್ಕಾಗಿ ಮಾಧ್ಯಮಗಳ ಸಹಕಾರ ಅತ್ಯಗತ್ಯ ಎಂದು ಅವರು ಕೋರಿದರು.

ಇಂದಿನ ಶಿಕ್ಷಣ ಮತ್ತು ಔದ್ಯೋಗಿಕ ವಲಯಗಳಲ್ಲಿ ಇರುವ ಬೇಡಿಕೆಗಳ ನಡುವಿನ ಅಂತರವನ್ನು ತೆಗೆದುಹಾಕುವಲ್ಲಿ ನೂತನ ಶಿಕ್ಷಣ ನೀತಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಯು ತನ್ನ ಆಯ್ಕೆಯ, ಬಯಕೆಯ ವಿಷಯಗಳನ್ನು ಮುಕ್ತವಾಗಿ ಕಲಿಯಲು ನೂತನ ಶಿಕ್ಷಣ ನೀತಿ ಸಹಕಾರಿಯಾಗಲಿದೆ ಎಂದು ಸಂವಾದದ ವೇಳೆ ಸಚಿವರು ಹೇಳಿದರು. 

ಸಾಮಾಜಿಕವಾಗಿ ಪ್ರಸ್ತುತವಾಗಿರುವ ವಿಷಯಗಳು, ಜೀವನ ಮೌಲ್ಯಗಳು, ಜೀವನ ಅನುಭವಗಳನ್ನು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿತು ಪದವಿ ನಂತರ ಅವರು ಸಮಾಜವನ್ನು, ಜೀವನವನ್ನು ಸಮರ್ಥವಾಗಿ ಎದುರಿಸುವಂತೆ ಮಾಡುವಲ್ಲಿ ಹೊಸ ಶಿಕ್ಷಣ ನೀತಿ ಸಹಾಯವಾಗಲಿದೆ. 

ಪುಸ್ತಕದಲ್ಲಿರುವುದನ್ನು ಉರು ಹೊಡೆದು ಬರೆದು ಪರೀಕ್ಷೆಯಲ್ಲಿ ಬರೆದು ತೇರ್ಗಡೆ ಹೊಂದುವುದು ಮಾತ್ರ ಶಿಕ್ಷಣವಲ್ಲ. ಸಮಸ್ಯೆಗಳನ್ನು ಬಗೆಹರಿಸಲು, ಅಡೆತಡೆಗಳನ್ನು ನಿವಾರಿಸುವಲ್ಲಿ ಶಿಕ್ಷಣ ನೀತಿ ಸಹಾಯವಾಗಲಿದೆ. 

ಸುಮಾರು ಐದೂವರೆ ವರ್ಷಗಳ ದೀರ್ಘಕಾಲದ ಸಮಾಲೋಚನೆ ಹಾಗೂ 3 ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಕ್ರೋಡೀಕರಿಸಿ ಎನ್.ಇ.ಪಿ. ಕರಡು ರೂಪಿಸಲಾಗಿದೆ. ಇದು ನಮ್ಮ ತನವನ್ನು ಉಳಿಸಿಕೊಂಡೇ ಜಾಗತಿಕ ಪೈಪೋಟಿಯಲ್ಲಿ ಯಶಸ್ವಿಯಾಗಬೇಕೆಂಬ ಆಶಯ ಹೊಂದಿದೆ. ಕನ್ನಡ ಭಾಷೆಗಾಗಲೀ ಅಥವಾ  ನಮ್ಮ ಭಾರತದ ಇನ್ನಿತರ ಭಾಷೆಗಾಗಲೀ ಇದರಿಂದ ಧಕ್ಕೆಯಾಗುವುದಿಲ್ಲ.

ಪದವಿ ಹಂತದಲ್ಲಿ ಎರಡು ವರ್ಷಗಳ ಅವಧಿಗೆ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಿರುವುದರ ಜೊತೆಗೆ ಉನ್ನತ ಶಿಕ್ಷಣದ ಕೋರ್ಸ್ ಗಳನ್ನು ಪ್ರಾದೇಶಿಕ ಭಾಷೆಯಲ್ಲೂ ಕಲಿಸುವ ವ್ಯವಸ್ಥೆ ಜಾರಿಗೊಳ್ಳಲಿದೆ. ಈ ಕ್ರಮಗಳಿಂದಾಗಿ, ನಮ್ಮ ಭಾಷೆಗಳು ಮತ್ತಷ್ಟು ಬಲಗೊಳ್ಳಲಿವೆ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದರು.

ಸರ್ಕಾರಿ ವ್ಯವಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ  ಈ ನೀತಿಯು ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶಗಳನ್ನು ಹೆಚ್ಚಿಸುತ್ತದೆ. ಹಾಗೆಯೇ ಬೋಧಕರಿಗೆ ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮಂಡಳಿಗಳಲ್ಲೂ ಚಲನಶೀಲತೆಯನ್ನು ಮೂಡಿಸುತ್ತದೆ. ವಿದ್ಯಾರ್ಥಿಗಳಲ್ಲಿ ಜ್ಞಾನದ ಜೊತೆಗೆ ಕೌಶಲಗಳನ್ನು ಬೆಳೆಸಲು ಸಹಕಾರಿ. ಒಟ್ಟಾರೆ ವಿದ್ಯಾರ್ಥಿಗಳನ್ನು ಪರಿಪೂರ್ಣ ವ್ಯಕ್ತಿಗಳನ್ನಾಗಿಸುವ ಆಶಯ ಹೊಂದಿದ ಸಮಗ್ರ ದೃಷ್ಟಿಕೋನದ ನೀತಿ ಇದಾಗಿದೆ ಎಂದರು.

ಸಿಇಟಿ ಪರೀಕ್ಷೆ: ನಾಳೆ ರಾಜ್ಯಾದ್ಯಂತ 530 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಯಲಿದ್ದು, ಬೆಂಗಳೂರಿನಲ್ಲಿ 86 ಕೇಂದ್ರಗಳಲ್ಲಿ, 444 ಬೇರೆ ಜಿಲ್ಲೆಗಳಲ್ಲಿ, 2 ಲಕ್ಷದ 1 ಸಾವಿರದ 816 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ, ಪರೀಕ್ಷೆಗೆ ಕೋವಿಡ್-19 ನಿಯಮಗಳ ಮಧ್ಯೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ಮಾಡಿಕೊಂಡು ಸಿದ್ದತೆ ಮಾಡಲಾಗಿದೆ, ವಿದ್ಯಾರ್ಥಿಗಳು ನಿರಾಳರಾಗಿ ಪರೀಕ್ಷೆ ಬರೆಯಬಹುದು ಎಂದರು.

ಈ ಬಾರಿ ಪಿಯುಸಿ ಅಂಕಗಳನ್ನು ಪರಿಗಣಿಸದೆ ಕೇವಲ ಸಿಇಟಿ ಅಂಕಗಳನ್ನು ಮಾತ್ರ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.

SCROLL FOR NEXT