ರಾಜ್ಯ

ತುಮಕೂರಿನ ಮಹಿಳೆಯ ಅತ್ಯಾಚಾರ, ಹತ್ಯೆ ಕೇಸಿನಲ್ಲಿ ಕಾಣದ ಪ್ರಗತಿ: ತಿಗಳ ಸಮುದಾಯದವರಿಂದ ಪ್ರತಿಭಟನೆ

Sumana Upadhyaya

ತುಮಕೂರು: ತುಮಕೂರು ಗ್ರಾಮಾಂತರ ತಾಲ್ಲೂಕಿನ ಬಡೆಸಬರಪಾಳ್ಯ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಮಹಿಳೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ನಡೆದು ವಾರವಾದರೂ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿಲ್ಲ.

ಪೊಲೀಸರ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದ್ದು, ಈ ನಿಟ್ಟಿನಲ್ಲಿ ಆಕ್ರೋಶಭರಿತ ತಿಗಳ ಸಮುದಾಯದವರು ನಿನ್ನೆ ತುಮಕೂರಿನ ಮಿನಿ ವಿಧಾನ ಸೌಧದ ಟೌನ್ ಹಾಲ್ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸಮುದಾಯದ ರಾಜ್ಯಾಧ್ಯಕ್ಷ ಸುಬ್ಬಣ್ಣ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಆದ ಘಟನೆಯಂತೆಯೇ ಸರ್ಕಾರ ಈ ಪ್ರಕರಣವನ್ನು ಸಹ ಏಕೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಹತ್ಯೆಗೀಡಾದ ಮಹಿಳೆ ಹಿಂದುಳಿದ ಸಮುದಾಯಕ್ಕೆ ಸೇರಿದವರು ಎಂದೇ ಅಥವಾ ಬಡ ಮಹಿಳೆ ಎಂದೇ ಎಂದು ಪ್ರಶ್ನಿಸಿದ್ದಾರೆ.

ಇಲ್ಲಿ ಮೃತಪಟ್ಟಿರುವ ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಸರ್ಕಾರ ಅವರಿಗೆ ಪರಿಹಾರ ನೀಡಬೇಕು ಎಂದು ಕೂಡ ಪ್ರತಿಭಟನಾ ನಿರತರು ಒತ್ತಾಯಿಸಿದ್ದಾರೆ. ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಈ ಮಧ್ಯೆ, ಕೇಂದ್ರ ವಲಯ ಐಜಿಪಿ ಎಂ ಚಂದ್ರಶೇಖರ್ ಕ್ಯಾತಸಂದ್ರ ಪೊಲೀಸ್ ಠಾಣೆಗೆ ಭೇಟಿ ನೀಡಿ ತನಿಖೆಯನ್ನು ಚುರುಕುಗೊಳಿಸುವಂತೆ ಆದೇಶ, ಸೂಚನೆ ಮತ್ತು ಸಲಹೆಗಳನ್ನು ನೀಡಿದ್ದಾರೆ.

SCROLL FOR NEXT