ಶಿವಮೊಗ್ಗ: ಸಾಗರ ತಾಲ್ಲೂಕಿನ ಕಾರ್ಗಲ್ ಬಳಿಯಿರುವ ಶರಾವತಿ ಹಿನ್ನೀರಿನ ಮುಪ್ಪಾನೆ ನೇಚರ್ ಕ್ಯಾಂಪ್ನಲ್ಲಿ ರಾಜ್ಯದ ಮೊದಲ ಕಪ್ಪೆ ಹಬ್ಬಕ್ಕೆ ಜಿಲ್ಲೆ ಸಜ್ಜಾಗಿದೆ.
ಕರ್ನಾಟಕ ಅರಣ್ಯ ಇಲಾಖೆ ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಶನಿವಾರ ಮತ್ತು ಭಾನುವಾರ "ಕಪ್ಪೆ ಹಬ್ಬ" ಆಚರಣೆ ಮಾಡುತ್ತಿದೆ. ಸಮಾಜದಲ್ಲಿ ಇಂಡಿಕೇಟರ್ ಗಳಾಗಿ ಕೆಲಸ ಮಾಡುವ ಕಪ್ಪೆಗಳ ಮಹತ್ವ, ಅವುಗಳ ಬದುಕಿನ ಶೈಲಿ ಕುರಿತು ಸಮಾಜಕ್ಕೆ ಅರಿವು ಮೂಡಿಸುವ ಉದ್ದೇಶದಿಂದ ಕರ್ನಾಟಕ ಅರಣ್ಯ ಇಲಾಖೆ ಇದೇ ಡಿಸೆಂಬರ್ 18 ಮತ್ತು 19 ರಂದು ಶಿವಮೊಗ್ಗ ಜಿಲ್ಲೆಯ ಕಾರ್ಗಲ್ ನ ಮುಪ್ಪನೆ ಪ್ರಕೃತಿ ಶಿಬಿರದಲ್ಲಿ ಆಯೋಜಿಸಲಾಗಿದೆ.
ಕಪ್ಪೆಗಳ ಬಗ್ಗೆ ಅಧ್ಯಯನ ಮಾಡುವರು, ಜ್ಞಾನ ಗಳಿಸಲು ಆಸಕ್ತಿ ಉಳ್ಳವರು ಈ ಕಪ್ಪೆ ಹಬ್ಬದಲ್ಲಿ ಪಾಲ್ಗೊಳ್ಳಬಹುದು. ಈಗಾಗಲೇ ಪ್ರಾಣಿಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ಕುವೆಂಪು ವಿವಿಯ ವಿದ್ಯಾರ್ಥಿಗಳು ಸೇರಿ ನೂರು ವಿದ್ಯಾರ್ಥಿಗಳು ಈ ಕಪ್ಪೆ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನು ಸಾರ್ವಜನಿಕರು ಕೂಡ 50 ಮಂದಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ಕಾಲೆತ್ತಿ ನಾಟ್ಯವಾಡುವ ಕೊಟ್ಟಿಗೆಹಾರ ಕಪ್ಪೆಗೂ, ವಿದೇಶಿ ಬಾರ್ನಿಯಾ ಕಪ್ಪೆ ನಡುವಿನ ವ್ಯತ್ಯಾಸ: ಅಧ್ಯಯನದಿಂದ ಬಹಿರಂಗ
ಮುಪ್ಪಾನೆ ಪ್ರಕೃತಿ ಶಿಬಿರದಲ್ಲಿ ಎರಡು ದಿನ ನಡೆಯಲಿರುವ ಈ ಕಪ್ಪೆ ಹಬ್ಬದಲ್ಲಿ ಪಾಲ್ಗೊಳ್ಳುವರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಸ್ವಂತ ಪ್ರಯಾಣ ವೆಚ್ಚ ಮಾತ್ರ ಭರಿಸಿಕೊಳ್ಳಬೇಕು. ವಸತಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮೊದಲೇ ನೋಂದಾಯಸಿಕೊಳ್ಳಬೇಕು ಎಂದು ಕಪ್ಪೆ ಹಬ್ಬ ಆಯೋಜಕರು ತಿಳಿಸಿದ್ದಾರೆ. ಸಂಪರ್ಕ ಸಂಖ್ಯೆ: ವಲಯ ಅರಣ್ಯ ಅಧಿಕಾರಿಗಳು ಕಾರ್ಗಲ್ , ಮುಪ್ಪಾನೆ ಪ್ರಕೃತಿ ಶಿಬಿರ, 8277383139 - 9448407544. ಈ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಕರ್ನಾಟಕಕ್ಕೆ ಶೀಘ್ರವೇ ರಾಜ್ಯ ಕಪ್ಪೆ!
ಮಧ್ಯಾಹ್ನ 12.15ಕ್ಕೆ ಕಪ್ಪೆಗಳ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ‘ಸಂಶೋಧನೆ ಮತ್ತು ನಾಗರಿಕ ವಿಜ್ಞಾನದ ಅಗತ್ಯ’ ಕುರಿತು ಉಪನ್ಯಾಸ ನಡೆಯಲಿದೆ. ಮಧ್ಯಾಹ್ನ 3.15ಕ್ಕೆ ‘ಉಭಯಚರಗಳ ಸಂರಕ್ಷಣೆಯಲ್ಲಿ ಡಿಎನ್ಎ ಬಾರ್ಕೋಡಿಂಗ್ ಪಾತ್ರ’ ಕುರಿತು ಮತ್ತೊಂದು ಉಪನ್ಯಾಸ ನಡೆಯಲಿದೆ.