ರಾಜ್ಯ

ಸದಾಶಿವನಗರ ಸ್ಯಾಂಕಿ ಕೆರೆ ಬಳಿಯಿರುವ ಶಿವಾಜಿ ಪುತ್ಥಳಿಗೆ ಮಸಿ ಬಳಿದ ಪ್ರಕರಣ: ಏಳು ಮಂದಿ ಬಂಧನ

Sumana Upadhyaya

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸದಾಶಿವನಗರ ಬಳಿ ಶಿವಾಜಿ ಪುತ್ಥಳಿಗೆ ಕಪ್ಪು ಬಣ್ಣ ಬಳಿದ ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಅವರು, ಮೊನ್ನೆ ಡಿಸೆಂಬರ್ 17ರಂದು ಸದಾಶಿವನಗರದ ಬಾಷ್ಯಂ ಸರ್ಕಲ್ ಹತ್ತಿರದ ಸ್ಯಾಂಕಿ ಕೆರೆಯ ಶಿವಾಜಿ ಪುತ್ಥಳಿಗೆ ಕಪ್ಪು ಮಸಿ ಬಳಿಯಲಾಗಿತ್ತು. ಇದಾದ ಬಳಿಕ ಮರಾಠ ಅಸೋಸಿಯೇಷನ್ ನವರು ನೀಡಿದ್ದ ದೂರಿನ ಆಧಾರದ ಮೇಲೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸ್ಥಳದಲ್ಲಿ ಸಿಕ್ಕಿದ ಕುರುಹುಗಳು ಮತ್ತು ತನಿಖೆಯ ಬಳಿಕ ನಿನ್ನೆ ಸಾಯಂಕಾಲ 5 ಮಂದಿಯನ್ನು ಹಾಗೂ ಇಂದು ಬೆಳಗ್ಗೆ ಇಬ್ಬರನ್ನು ಬಂಧಿಸಿದ್ದೇವೆ. ಒಟ್ಟಾರೆ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಏಳು ಮಂದಿಯನ್ನು ಬಂಧಿಸಿದ್ದೇವೆ. ಅವರ ಬಳಿಯಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೂ ಕೆಲವರನ್ನು ಬಂಧಿಸಬೇಕಾಗಿದೆ ಎಂದರು.

SCROLL FOR NEXT