ಬೆಂಗಳೂರು: ರೈಲ್ವೆ ಹಳಿ ಮೇಲಿನ ಅಸಹಜ ಸಾವು ಪ್ರಕರಣಗಳ ದಾಖಲಿಸಲು ಸರ್ಕಾರಿ ರೈಲ್ವೆ ಪೊಲೀಸರು, ರಿಮೋಟ್ ಸೆನ್ಸಿಂಗ್ (ದೂರ ಸಂವೇದಿ) ಆ್ಯಪ್ ಬಳಸುತ್ತಿದ್ದಾರೆ. ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ( ಕೆಎಸ್ ಸಿಆರ್ ಎಸಿ) ಸಿದ್ಧಪಡಿಸಿರುವ ಈ ಆ್ಯಪ್ ನಲ್ಲಿ, ಸ್ಥಳದ ಸ್ಪಷ್ಟತೆ ಮತ್ತು ಸಂಬಂಧಿತ ಜಿಯೋ ಟ್ಯಾಗ್ ಫೋಟೋದೊಂದಿಗೆ ಮೃತ ವ್ಯಕ್ತಿಯ ಎಲ್ಲಾ ವಿವರಗಳು ದಾಖಲಾಗುತ್ತವೆ.
ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಆರಂಭದಲ್ಲಿ ಬಳಸಿದ ಈ ತಂತ್ರಜ್ಞಾನವನ್ನು ಇದೀಗ ರೈಲ್ವೆ ಪೊಲೀಸರು ಈ ವರ್ಷದ ಮಾರ್ಚ್ ತಿಂಗಳಿನಿಂದ ಬಳಸಿಕೊಳ್ಳುತ್ತಿದ್ದಾರೆ.
ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಮಗ್ರ ವಿವರ ನೀಡಿದ ಜಿಆರ್ ಪಿ ಎಸ್ಪಿ ಡಾ. ಆರ್. ಸಿರಿ ಗೌರಿ, ಸ್ಥಳಕ್ಕೆ ಭೇಟಿ ನೀಡುವ ಪೊಲೀಸರು, ಕೇವಲ ತಮ್ಮ ಮೊಬೈಲ್ ನಲ್ಲಿರುವ ಕ್ರೈಮ್ ಲೋಕೇಷನ್ ಆ್ಯಪ್ ಗೆ ಲಾಗ್ ಆನ್ ಆಗಬೇಕಾದ ಅಗತ್ಯವಿರುತ್ತದೆ. ಇದರಲ್ಲಿ ಸ್ಥಳ, ಮೃತದೇಹ, ಮತ್ತಿತರ ವಿವರಗಳು ದಾಖಲಾಗಿರುತ್ತದೆ. ಜಿಪಿಆರ್ ಬಳಕೆಯಿಂದ ಸರ್ವರ್ ನಲ್ಲಿ ಡಾಟಾ ನೇರವಾಗಿ ಅಪ್ ಲೋಡ್ ಆಗುತ್ತದೆ. ಇದರಲ್ಲಿ ದಾಖಲೆ ಶಾಶ್ವತವಾಗಿರುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಭಾರತೀಯ ರೈಲ್ವೇಸ್ ತೀವ್ರ ನಷ್ಟದಲ್ಲಿರುವುದು ಸಿಎಜಿ ವರದಿಯಿಂದ ಬಹಿರಂಗ: ರೈಲ್ವೇಸ್ ಲಾಭದಲ್ಲಿದೆ ಎಂದಿದ್ದ ಕೇಂದ್ರ ಸರ್ಕಾರ
ಕೆಲವೊಂದು ಸಂದರ್ಭಗಳಲ್ಲಿ ಹಂತಕರು ಕೊಲೆ ಮಾಡಿ, ಮೃತದೇಹವನ್ನು ರೈಲ್ವೆ ಹಳಿ ಮೇಲೆ ಎಸೆದು ಹೋಗಿರುತ್ತಾರೆ. ಆ್ಯಪ್ ಬಳಕೆಯಿಂದ ಸ್ಥಳಕ್ಕೆ ಧಾವಿಸುವ ಪೊಲೀಸರಿಗೆ ಕೊಲೆ ಬಗ್ಗೆ ಮಾಹಿತಿ ದೊರೆಯಲು ನೆರವಾಗುತ್ತದೆ ಎಂದು ಅವರು ಹೇಳಿದರು. ಮೊದಲಿಗೆ ತನ್ನ ಕೆಲಸವನ್ನು ಪೂರ್ಣಗೊಳಿಸಲು ಆ್ಯಪ್ 90 ನಿಮಿಷ ತೆಗೆದುಕೊಳ್ಳುತಿತ್ತು. ಇದೀಗ ಅದಕ್ಕೆ ಕೇವಲ 10 ನಿಮಿಷ ಸಾಕಾಗಲಿದೆ. ಎಂದು ಅವರು ತಿಳಿಸಿದರು.
ಆತ್ಮಹತ್ಯೆ, ಅಪಘಾತಗಳು ಅಥವಾ ಕೊಲೆಗಳು ನಡೆಯುತ್ತಿರುವ ಸ್ಥಳಗಳನ್ನು ಗುರುತಿಸಲು ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಆ್ಯಪ್ ರೈಲ್ವೆಗೆ ನೆರವಾಗಲಿದೆ ಎಂದು ಕೆಎಸ್ ಆರ್ ಎಸ್ ಎಸಿ ಗ್ರೂಪ್ ಮುಖ್ಯಸ್ಥ ಎ.ಎಸ್. ರಾಜಶೇಖರ್ ಹೇಳಿದರು.
ಈ ವರ್ಷ ರೈಲ್ವೆ ಆವರಣದಲ್ಲಿ 1,243 ಅಸಹಜ ಸಾವು ಪ್ರಕರಣಗಳ ಮಾಹಿತಿಯನ್ನು ಜಿಆರ್ ಪಿ ಹಂಚಿಕೊಂಡಿದೆ. ಯಶವಂತಪುರ ರೈಲ್ವೆ ಪೊಲೀಸ್ ವ್ಯಾಪ್ತಿಯಲ್ಲಿ 189, ಬೆಂಗಳೂರು ನಗರದಲ್ಲಿ 167, ಬೆಂಗಳೂರು ಕಂಟೋನ್ಮೆಂಟ್ (98) ಮೈಸೂರು ( 95) ವಾಡಿ (88) ಮತ್ತು ಹುಬ್ಬಳ್ಳಿಯಲ್ಲಿ (87) ಸಾವು ಪ್ರಕರಣಗಳು ದಾಖಲಾಗಿವೆ.