ರಾಜ್ಯ

'ಒಂದು ಮಿಸ್ಡ್ ಕಾಲ್ ನೀಡಿ, ನೇತ್ರ ದಾನ ಮಾಡಿ': ನಾರಾಯಣ ನೇತ್ರಾಲಯ ಮನವಿ

Sumana Upadhyaya

ಬೆಂಗಳೂರು: ನೇತ್ರದಾನ ಮಹಾದಾನ, ಆದರೆ ಅದನ್ನು ಹೇಗೆ ದಾನ ಮಾಡುವುದು, ಪ್ರಕ್ರಿಯೆ ಹೇಗೆ ಎಂದು ಹಲವರಿಗೆ ಗೊತ್ತಿರುವುದಿಲ್ಲ. ಈ ಸಮಸ್ಯೆಯನ್ನು ಹೋಗಲಾಡಿಸಲು ಮತ್ತು ಕಣ್ಣುಗಳ ಬೇಡಿಕೆಗೆ ತಕ್ಕಂತೆ ಪೂರೈಸಲು ನಾರಾಯಣ ನೇತ್ರಾಲಯ ಡಾ ರಾಜ್ ಕುಮಾರ್ ನೇತ್ರ ಬ್ಯಾಂಕ್ ಮೂಲಕ ವಿಶೇಷ ಸಂಖ್ಯೆಯನ್ನು ಆರಂಭಿಸಿದೆ. ಅದು 888401880 ಆಗಿದ್ದು, ಈ ಸಂಖ್ಯೆಗೆ ಯಾರು ಬೇಕಾದರೂ ಮಿಸ್ಡ್ ಕಾಲ್ ನೀಡಿ ಇಷ್ಟವಿದ್ದರೆ ತಮ್ಮ ಕಣ್ಣುಗಳನ್ನು ದಾನ ನೀಡಬಹುದು.

ಈ ಸಂಖ್ಯೆಯನ್ನು ನಿನ್ನೆ ಬೆಂಗಳೂರಿನ ಕಂಠೀರವ ಸ್ಡುಡಿಯೊ ಬಳಿಯಿರುವ ನಟ ಪುನೀತ್ ರಾಜ್ ಕುಮಾರ್ ಸಮಾಧಿ ಬಳಿ ಅವರ ಅಣ್ಣ ನಟ ರಾಘವೇಂದ್ರ ರಾಜ್ ಕುಮಾರ್ ಘೋಷಿಸಿದರು. ಅಪ್ಪು ನಿಧನರಾಗಿ ನಿನ್ನೆಗೆ ಎರಡು ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಅವರ ಪತ್ನಿ, ಪುತ್ರಿಯರು ಸೇರಿದಂತೆ ಇಡೀ ಕುಟುಂಬ ಸಮಾಧಿ ಬಳಿ ಸೇರಿ ಪೂಜೆ ಸಲ್ಲಿಸಿ ಸ್ಮರಿಸಿದರು.

ಐ ಬ್ಯಾಂಕ್(ನೇತ್ರ ಬ್ಯಾಂಕ್) ವಾಗ್ದಾನದ ಪ್ರಕ್ರಿಯೆ ಪೂರ್ಣಗೊಳಿಸಲು ಭರ್ತಿ ಮಾಡಬೇಕಾದ ಫಾರ್ಮ್‌ಗೆ ಲಿಂಕ್ ಅನ್ನು ಕಳುಹಿಸುತ್ತದೆ. ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಿದ ನಂತರ, ಉದ್ದೇಶಿತ ದಾನಿ ತಕ್ಷಣವೇ ನೇತ್ರ ಪ್ರತಿಜ್ಞೆ ಪ್ರಮಾಣಪತ್ರವನ್ನು ಪಡೆಯುತ್ತಾನೆ ಎಂದು ನಾರಾಯಣ ನೇತ್ರಾಲಯದ ಡಾ ಭುಜಂಗ್ ಶೆಟ್ಟಿ ಹೇಳಿದರು, ದಾನಿ ಎಲ್ಲಿ ಬೇಕಾದರೂ, ಯಾವ ಸ್ಥಳದಲ್ಲಿಯಾದರೂ ದಾನ ಮಾಡಬಹುದು.

ಎರಡು ತಿಂಗಳ ಹಿಂದೆ ಪುನೀತ್ ರಾಜ್ ಕುಮಾರ್ ನಿಧನರಾದಾಗ ಅವರ ಕಣ್ಣುಗಳಿಂದ ನಾಲ್ವರಿಗೆ ಬೆಳಕಾಗಿತ್ತು. ಪುನೀತ್ ಅವರ ಕಣ್ಣುಗಳನ್ನು ದಾನ ಮಾಡಿರುವುದು ನಮಗೆ ಶಕ್ತಿ ನೀಡಿದೆ. ಈಗ ನಾಲ್ಕು ಜನ ನಮ್ಮನ್ನು ಅವನ ಕಣ್ಣುಗಳಿಂದ ನೋಡುತ್ತಿದ್ದಾರೆ ಅನ್ನಿಸುತ್ತದೆ. ಕೋವಿಡ್ ಸಮಯದಲ್ಲಿ ಅನೇಕರಿಗೆ ಮನೆಯಿಂದ ಹೊರಬರಲು, ಕಣ್ಣುಗಳನ್ನು ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಲು ಸಾಧ್ಯವಾಗದಿರಬಹುದು. ಈ ಮಿಸ್ಡ್ ಕಾಲ್ ನೀಡಿದರೆ ವಾಟ್ಸಾಪ್‌ನಲ್ಲಿ ಪ್ರಮಾಣಪತ್ರವನ್ನು ಪಡೆಯಬಹುದು ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದರು.

ಪುನೀತ್ ರಾಜ್‌ಕುಮಾರ್ ಅವರ ಕಣ್ಣುಗಳನ್ನು ದಾನ ಮಾಡಿದ ನಂತರ, ನಾರಾಯಣ ನೇತ್ರಾಲಯದಲ್ಲಿರುವ ಡಾ ರಾಜ್‌ಕುಮಾರ್ ನೇತ್ರ ಬ್ಯಾಂಕ್ ಗೆ 1,200 ನೇತ್ರದಾನ ಹರಿದುಬಂತು. ಅದರಲ್ಲಿ 440 ಜನರು ದೃಷ್ಟಿ ಗಳಿಸಿಕೊಂಡಿದ್ದಾರೆ.

SCROLL FOR NEXT