ರಾಜ್ಯ

ಮಂಡ್ಯ: ಹಳಿ ದಾಟುತ್ತಿದ್ದವನ ಮೇಲೆ ಹರಿದ ರೈಲು: ಹಠಾತ್ ಬ್ರೇಕ್ ನಿಂದ ಎಂಜಿನ್ ಗೆ ಪೆಟ್ಟು, ಸಂಚಾರ ವಿಳಂಬ

Sumana Upadhyaya

ಬೆಂಗಳೂರು: ಯುವಕನೊಬ್ಬ ರೈಲ್ವೆ ಹಳಿ ದಾಟುತ್ತಿದ್ದ ವೇಳೆ ರೈಲು ಹರಿದ ಘಟನೆ ಯಲಿಯೂರು-ಮಂಡ್ಯ ರೈಲ್ವೆ ಮಾರ್ಗದಲ್ಲಿ ಸಂಭವಿಸಿದೆ. ಮೈಸೂರು-ಬೆಂಗಳೂರು ಸಂಗೊಳ್ಳಿ ರಾಯಣ್ಣ ಮೆಮು ಪ್ರಯಾಣಿಕ ರೈಲು ಸಂಖ್ಯೆ 06258 ನಲ್ಲಿ ಕಳೆದ ಅಪರಾಹ್ನ ಈ ದುರಂತ ಸಂಭವಿಸಿದೆ.

ಅಪಘಾತ ಸಂಭವಿಸಿದ ನಂತರ ಲೊಕೊ ಪೈಲಟ್ ತುರ್ತು ಬ್ರೇಕ್ ಹಾಕಿದ್ದರಿಂದ ರೈಲು 94 ನಿಮಿಷ ತಡವಾಗಿ ತಲುಪಿತು. ಈ ಮಾರ್ಗದಲ್ಲಿ ಬರುತ್ತಿದ್ದ ಬೇರೆ ರೈಲುಗಳಿಗೂ ಇದರಿಂದ ತೊಂದರೆಯಾಗಿ ವಿವಿಧ ನಿಲ್ದಾಣಗಳಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂತು.

ಮೆಮು ರೈಲು ನಿನ್ನೆ ಅಪರಾಹ್ನ 2.40ರ ಸುಮಾರಿಗೆ ಯಲಿಯೂರು ರೈಲು ನಿಲ್ದಾಣದಿಂದ ಮಂಡ್ಯಕ್ಕೆ ಪ್ರಯಾಣಿಸುತ್ತಿತ್ತು. ಅಪಘಾತವಾದ ಕೂಡಲೇ ಲೊಕೊ ಪೈಲಟ್ ರಾಮಕೃಷ್ಣ ಬ್ರೇಕ್ ಹಾಕಿದ್ದರಿಂದ ಸುಮಾರು 94 ನಿಮಿಷಗಳ ಕಾಲ ಅಪಘಾತ ಸಂಭವಿಸಿದ ಸ್ಥಳದಲ್ಲಿ ರೈಲು ನಿಲ್ಲಬೇಕಾಯಿತು. ನಂತರ ಲೊಕೊ ಪೈಲಟ್ ಹಿಂಬದಿಯ ಕ್ಯಾಬ್ ನಿಂದ ರೈಲನ್ನು ಚಲಾಯಿಸಲು ನಿರ್ಧರಿಸಿದರು. ಕೊನೆಗೆ ರೈಲು ಅಲ್ಲಿಂದ ಹೊರಟಿದ್ದು ಸಾಯಂಕಾಲ 4 ಗಂಟೆ 8 ನಿಮಿಷಕ್ಕೆ ಎಂದು ಬೆಂಗಳೂರು ವಿಭಾಗದ ರೈಲು ಅಧಿಕಾರಿಗಳು ತಿಳಿಸಿದ್ದಾರೆ.

ಮಂಡ್ಯ ನಿಲ್ದಾಣವನ್ನು 10 ನಿಮಿಷ ತಡವಾಗಿ ತಲುಪಿದ ರೈಲು ಈ ವೇಳೆ ಪ್ರಯಾಣಿಕರಿಗೆ ಅದೇ ಮಾರ್ಗದಲ್ಲಿ ಬಂದ ಬೇರೆ ರೈಲನ್ನು ಹತ್ತಿಕೊಳ್ಳುವ ವ್ಯವಸ್ಥೆ ಮಾಡಲಾಯಿತು.

ಈ ವೇಳೆ ಒಂದು ಮಾರ್ಗದಲ್ಲಿ ಮಾತ್ರ ಸಂಚಾರಕ್ಕೆ ಅನುವು ನೀಡಿದ್ದರಿಂದ ಹಲವು ರೈಲುಗಳು ವಿಳಂಬವಾದವು. ರೈಲು ಹಠಾತ್ತನೆ ಬ್ರೇಕ್ ಹಾಕಿದ್ದರಿಂದ ಎಂಜಿನ್ ನ ಕೆಳಗಿರುವ ಪೈಪ್ ಗೆ ಹಾನಿಯುಂಟಾಗಿದ್ದು ಇದರಿಂದ ರೈಲನ್ನು ಸ್ಟಾರ್ಟ್ ಮಾಡಲು ಕಷ್ಟವಾಗಿತ್ತು.

SCROLL FOR NEXT