ರಾಜ್ಯ

ವಿಜಯಪುರ: ಸರಳ, ಸಜ್ಜನ ರಾಜಕಾರಣಿ ಮಾಜಿ ಶಾಸಕ ಎನ್.ಎಸ್. ಖೇಡ್ ನಿಧನ

Shilpa D

ವಿಜಯಪುರ: ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎನ್.ಎಸ್.ಖೇಡ್(74) ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಅವರಿಗೆ ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು, ಇಬ್ಬರು ಸಹೋದರರು, ನಾಲ್ವರು ಸಹೋದರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಸಾವಳಸಂಗದಲ್ಲಿ ಗುರುವಾರ ಸಂಜೆ ಜರುಗಲಿದೆ.

ಇಂಡಿ ತಾಲ್ಲೂಕಿನ ಸಾವಳಸಂಗ ಗ್ರಾಮದ ರೈತ ಕುಟುಂಬದವರಾದ ಎನ್.ಎಸ್.ಖೇಡ್ ಅವರು 1980ರಲ್ಲಿ ಜನತಾ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿ, ಕಡಿಮೆ ಮತಗಳಿಂದ ಪರಾಭವಗೊಂಡಿದ್ದರು. ಮಾಜಿ ಪ್ರಧಾನಿಗಳಾದ ಚಂದ್ರಶೇಖರ, ಎಚ್.ಡಿ.ದೇವೆಗೌಡ ಅವರ ದೀರ್ಘ ಕಾಲದ ಒಡನಾಡಿಯಾಗಿದ್ದ ಎನ್.ಎಸ್.ಖೇಡ ಅವರು, 1985-89 ರವರೆಗೆ ಇಂಡಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಕಳೆದ ಎರಡು ವರ್ಷಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ವಿಜಯಪುರ ನಗರದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ರಾಜಕೀಯದಲ್ಲಿ ಕಲುಷಿತ ವಾತಾವರಣ ಆರಂಭವಾಗುತ್ತಿದ್ದಂತೆ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು.

SCROLL FOR NEXT