ರಾಜ್ಯ

ಫೇಸ್ಬುಕ್ ಲೈವ್ ಬಂದು ನಾಗರೀಕರ ಸಮಸ್ಯೆ ಆಲಿಸಿದ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್

Manjula VN

ಬೆಂಗಳೂರು: ವಸತಿ ಪ್ರದೇಶಗಳಲ್ಲಿ ತಳ್ಳುವ ಗಾಡಿಗಳಲ್ಲಿ ಮೆಗಾಫೋನ್ ಬಳಕೆ ಮಾಡದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ. 

ಲಾಕ್ಡೌನ್ ವೇಳೆ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಲು ಶನಿವಾರ ಫೇಸ್ ಬುಕ್ ಲೈವ್ ನಲ್ಲಿ ಆಯುಕ್ತರು ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಆಯುಕ್ತರಿಗೆ ನಾಗರೀಕರಿಂದ ದೂರುಗಳ ಸುರಿಮಳೆಯೇ ಆಯಿತು. 

ಲಾಕ್ಡೌನ್ ವೇಳೆ ತಮಗೆ ಉಂಟಾಗಿರುವ ಸಮಸ್ಯೆಗಳನ್ನು ಅನೇಕರು ತೋಡಿಕೊಂಡರು. ಕೆಲವಸ ಸಮಸ್ಯೆಗಳಿಗೆ ಆಯುಕ್ತರಿಂದಲೇ ಪರಿಹಾರ ಕೂಡ ಸಿಕ್ಕಿತು. 

ನಾಗರೀಕರೊಂದಿಗೆ ಮಾತನಾಡಿದ ಕಮಲ್ ಪಂತ್ ಅವರು, ರಸ್ತೆಗಳಲ್ಲಿ ಮಕ್ಕಳು ಆಟವಾಡದಂತೆ ನೋಡಿಕೊಳ್ಳುವಂತೆ ಪೋಷಕರಿಗೆ ಸೂಚನೆ ನೀಡಿದರು. ಲಾಕ್ಡೌನ್ ಜಾರಿಗೆ ತಂದಿರುವ ಉದ್ದೇಶವೇ ಕೊರೋನಾ ಸರಪಳಿಯನ್ನು ಮುರಿಯುವ ಸಲುವಾಗಿ ಆಗಿದೆ. ರಸ್ತೆಗಳಲ್ಲಿ ಆಟವಾಡಲು ಮಕ್ಕಳನ್ನು ಬಿಟ್ಟರೆ ಇತರರಿಗೂ ಸಮಸ್ಯೆಗಳಾಗಲಿದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಕಾಂಟ್ಯಾಕ್ಟ್ ಲೆಸ್ ಪರಿಶೀಲನೆ ನಡೆಸುವಂತೆ ಸಂಚಾರಿ ಪೊಲೀಸರಿಗೆ ಸೂಚನೆ ನೀಡಿದ ಪೊಲೀಸ್ ಆಯುಕ್ತರು, ಇದಕ್ಕಾಗಿ ಕ್ಯಾಮೆರಾ, ಡಿಜಿಟಲ್ ಡಿವೈಸ್ ಗಳ ಸಹಾಯ ಪಡೆಯುವಂತೆ ಸಲಹೆ ನೀಡಿದ್ದಾರೆ. 

ಇನ್ನುಮುಂದೆ ಸಂಚಾರಿ ಪೊಲೀಸರು ನಿಯಮ ಉಲ್ಲಂಘಿಸುವವರ ವಾಹನಗಳನ್ನು ತಡೆದು ಪರಿಶೀಲನೆ ನಡೆಸುವುದಿಲ್ಲ, ಕ್ಯಾಮೆರಾಗಳ ಮೂಲಕ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಭವಿಷ್ಯದಲ್ಲೂ ಇದೇ ರೀತಿಯಲ್ಲೇ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ಲಸಿಕೆ ಹಾಕಿಸಿಕೊಳ್ಳುವ ಜನರಿಗೆ ಬೆಂಬಲ ಹಾಗೂ ಪ್ರೋತ್ಸಾಹ ನೀಡುತ್ತಿರುವ ಪೊಲೀಸರನ್ನು ಇದೇ ವೇಳೆ ಕಮಲ್ ಪಂತ್ ಅವರು ಶ್ಲಾಘಿಸಿದ್ದಾರೆ. 

ಇದೇ ವೇಳೆ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಪೊಲೀಸರ ಕಾರ್ಯಕ್ಕೆ ಸಾಕಷ್ಟು ಜನರು ಶ್ಲಾಘನೆ ವ್ಯಕ್ತಪಡಿಸಿದ್ದು, ರಾತ್ರಿ ವೇಳೆ ಗಸ್ತು ತಿರುಗಲು ಹಾಗೂ ಇತರೆ ಕರ್ತವ್ಯಕ್ಕೆ ಸಹಾಯ ಮಾಡಲು ಕೆಲವರು ಮುಂದಕ್ಕೆ ಬಂದಿದ್ದಾರೆ. 

SCROLL FOR NEXT