ರಾಜ್ಯ

ಕೊರೋನಾ ಲಸಿಕೆ ಪಡೆಯುವುದಕ್ಕೂ ಮುನ್ನವೇ ಕೈಗೆ ಬಂತು ಪ್ರಮಾಣಪತ್ರ: ಅಘಾತಗೊಂಡ ಯುವಕನಿಂದ ಬಿಬಿಎಂಪಿಗೆ ದೂರು

Manjula VN

ಬೆಂಗಳೂರು: ಕೊರೋನಾ ಲಸಿಕೆ ಪಡೆದುಕೊಳ್ಳುವುದಕ್ಕೂ ಮುನ್ನವೇ ಲಸಿಕೆ ಪ್ರಮಾಣಪತ್ರ ನೋಡಿದ ಯುವಕನೋರ್ವ ಆಘಾತಗೊಂಡು ಬಿಬಿಎಂಪಿಗೆ ದೂರು ನೀಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. 

ಕೋವಿನ್ ಆ್ಯಪ್ ನಲ್ಲಿ ತನ್ನ ಹೆಸರನ್ನು ನಮೂದಿಸಿದ್ದ ಜಾಲಹಳ್ಳಿ ನಿವಾಸಿ ಆದಿತ್ಯ ರಾಯ್ (24) ಅವರು ನಿನ್ನೆ ಮಧ್ಯಾಹ್ನ ಲಸಿಕೆ ಹಾಕಿಸಿಕೊಳ್ಳುವ ಸಲುವಾಗಿ ಆಸ್ಟರ್ ಆರ್'ವಿ ಆಸ್ಪತ್ರೆಗೆ ತೆರಳಲುತ್ತಿದ್ದರು. ಈ ವೇಳೆ ಲಸಿಕೆ ಯಶಸ್ವಿಯಾಗಿ ಪಡೆದುಕೊಂಡಿರುವ ಕುರಿತು ಆದಿತ್ಯ ಅವರ ಮೊಬೈಲ್'ಗೆ ಸಂದೇಶ ಬಂದಿದ್ದು, ಜೊತೆಗೆ ಲಸಿಕಾ ಪ್ರಮಾಣಪತ್ರದ ಲಿಂಕ್ ಕೂಡ ಬಂದಿದೆ. 

ಮೊಬೈಲ್ ಬಂದ ಸಂದೇಷ ನೋಡಿ ಬಹಳ ಆಘಾತವಾಯಿತು. ಲಸಿಕೆಯನ್ನೇ ಪಡೆದಿರಲಿಲ್ಲ. ಆಗಲೇ ಪ್ರಮಾಣಪತ್ರ ಬಂದಿರುವುದು ನೋಡಿ ಬಹಳ ಆಶ್ಚರ್ಯವಾಯಿತು. ಬಳಿಕ ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಸಾಕಷ್ಟು ಬಾರಿ ಮಾತುಕತೆ, ವಾದದ ಬಳಿಕ ಕೊನೆಗೂ ಲಸಿಕೆ ಪಡೆದುಕೊಂಡೆ. ಸಂದೇಶ ನೋಡಿ ಬಹಳ ಆತಂಕಗೊಂಡಿದ್ದೆ. ಲಸಿಕೆ ಪಡೆದುಕೊಳ್ಳುವ ಅವಕಾಶ ಕಳೆದುಕೊಳ್ಳುವ ಆತಂಕ ಶುರುವಾಗಿತ್ತು. ಸಂದೇಶ ಬಂದ ಬಳಿಕ ಕೂಡಲೇ ಆಸ್ಪತ್ರೆ ತೆರಳಿ ಅಲ್ಲಿನ ಸಿಬ್ಬಂದಿಗಳೊಂದಿಗೆ ಮಾತನಾಡಿದ್ದೆ. ಆದರೆ, ಆಸ್ಪತ್ರೆಯ ಸಿಬ್ಬಂದಿಗಳು ದೋಷಗಳನ್ನು ತಳ್ಳಿಹಾಕಿದ್ದರು. ನಿಮ್ಮ ಆಧಾರ್ ಕಾರ್ಡ್ ಬಳಸಿ ಬೇರೊಬ್ಬರು ಲಸಿಕೆ ಪಡೆದುಕೊಂಡಿರಬಹುದು ಎಂದು ಹೇಳಿದ್ದರು. ಸಾಕಷ್ಟು ಮಾತಿನ ಚಕಮಕಿ ಬಳಿಕ ಮತ್ತೆ ರಿಜಿಸ್ಟರ್ ಮಾಡಿಕೊಂಡು ಲಸಿಕೆ ನೀಡಿದರು ಎಂದು ಆದಿತ್ಯಾ ಅವರು ಹೇಳಿದ್ದಾರೆ. 

ಈ ಸಂಬಂಧ ಈಗಾಗಲೇ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಕೆಎಎಸ್ ಅಧಿಕಾರಿಯೊಂದಿಗೆ ಈ ಕುರಿತು ಮಾಹಿತಿ ನೀಡಿದ್ದೆ. ಬಳಿಕ ಅವರು ಆರೋಗ್ಯ ವಿಶೇಷ ಆಯುಕ್ತರಿಗೆ ಮೇಲ್ ಮಾಡಿ ದೂರು ನೀಡುವಂತೆ ತಿಳಿಸಿದ್ದರು. ಅವರಿಗೂ ದೂರು ನೀಡಿದ್ದೇನೆಂದು ತಿಳಿಸಿದ್ದಾರೆ. 

ಈ ನಡುವೆ ಆಸ್ಪತ್ರೆಯ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿ, ಬಿಬಿಎಂಪಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ತಾಂತ್ರಿಕ ಸಮಸ್ಯೆಗಳಿಂದಾಗಿ ಈ ರೀತಿಯಾಗಿರಬಹುದು ಎಂದು ಹೇಳಿದೆ.

SCROLL FOR NEXT